ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ದಂಡೆಪಳ್ಳಿ ಮಂಡಲದ ಮೆದರಿಪೇಟ್ ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ದಿನಗೂಲಿ ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೆದರಿಪೇಟ್ ಗ್ರಾಮದ ಸಲ್ಲಾ ಲಕ್ಷ್ಮೀನಾರಾಯಣ (ಎಡ್ಡಣ್ಣ) ಹಾಗೂ ವೆಲ್ಗನೂರು ಗ್ರಾಮದ ಚಂದನಗಾರಿ ನಾಗರಾಜು ಮೃತಪಟ್ಟವರು. ಅವರು ಕಬ್ಬಿಣದ ಸ್ಟ್ಯಾಂಡ್ನ್ನು ದೂಡಿಕೊಂಡು ಹೋಗುತ್ತಿದ್ದ ವೇಳೆ ಅದು ಪೆಟ್ರೋಲ್ ಬಂಕ್ ಸಮೀಪದಲ್ಲಿದ್ದ 11 ಕೆವಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಭಾರೀ ವಿದ್ಯುತ್ ಶಾಕ್ ತಗುಲಿತು.

ವಿದ್ಯುತ್ ಸ್ಪರ್ಶದ ತೀವ್ರತೆಗೆ ಇಬ್ಬರೂ ಗಂಭೀರವಾಗಿ ಸುಟ್ಟು ಭಸ್ಮವಾಗಿದ್ದಾರೆ. ಈ ವೇಳೆ ಅವರ ಜೊತೆ ಇದ್ದ ಮತ್ತೊಬ್ಬ ವ್ಯಕ್ತಿ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಒಬ್ಬಳೇ ವಧು, ಇಬ್ಬರು ವರರು! ಒಬ್ಬಳಿಗಾಗಿ ಎರಡು ರಾಜ್ಯದ ವ್ಯಕ್ತಿಗಳ ನಡುವೆ ಬಿಗ್ ಫೈಟ್
ಈ ಕಾರ್ಮಿಕರು ಮೆದರಿಪೇಟ್ನಲ್ಲಿರುವ ಒಬ್ಬ ಸಿಮೆಂಟ್ ವ್ಯಾಪಾರಿಯ ಬಳಿ ಕೆಲಸ ಮಾಡುತ್ತಿದ್ದರು. ಮನೆಯ ನಿರ್ಮಾಣ ಕಾರ್ಯಕ್ಕಾಗಿ ಕಬ್ಬಿಣದ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಡಿಯೋ ಇಲ್ಲಿದೆ
🚨SHOCKING | Two people died due to electric shock at Indian Oil petrol pump in Madaripet, Mancherial, Telangana pic.twitter.com/KnnHUixAuM
— The Tatva (@thetatvaindia) March 11, 2026
ಘಟನೆಯ ಮಾಹಿತಿ ತಿಳಿದ ತಕ್ಷಣ ದಂಡೆಪಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರಲ್ಲಿ ಒಬ್ಬರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

