Breaking News

ಜಮ್ಮು-ಕಾಶ್ಮೀರ: ತಂದೆಗೆ “ಬೈ ಬೈ ಪಾಪ” ಎಂದೇಳಿ ಚೆನಾಬ್ ನದಿಗೆ ಹಾರಿದ ಯುವತಿ

ದೋಡಾ :ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ “ಬೈ ಬೈ ಪಾಪ” ಎಂದು ಕೊನೆಯ ಮಾತನ್ನಾಡಿ ಯುವತಿಯೊಬ್ಬಳು ಸೇತುವೆಯ ಮೇಲಿಂದ ಭೋರ್ಗರೆಯುವ ಚೆನಾಬ್‌ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಪ್ರೇಮ್ ನಗರ ಸೇತುವೆ ಬಳಿ ನಡೆದಿದೆ. ನದಿಗೆ ಹಾರಿದ ಯುವತಿಯನ್ನು ಕೃಷ್ಣ ಲಾಲ್ ಅವರ ಪುತ್ರಿ ಪಾಯಲ್ ದೇವಿ ಎಂದು ಗುರುತಿಸಲಾಗಿದೆ.

ಪಾಯಲ್ ದೇವಿ ಅವರು ಸ್ಥಳೀಯ ಜಾತ್ರೆಗೆ ತೆರಳಿದ್ದು, ತಮ್ಮ ಗ್ರಾಮದ ಪರಿಚಿತ ವ್ಯಕ್ತಿಯೊಬ್ಬರ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗಮಧ್ಯೆ ಪ್ರೇಮ್ ನಗರ ಸೇತುವೆಯ ಬಳಿ ಯುವತಿಯ ದುಪಟ್ಟಾ ಬೈಕ್‌ನ ಚಕ್ರಕ್ಕೆ ಸಿಲುಕಿಕೊಂಡಿತ್ತು. ಅದನ್ನು ತೆಗೆಯಲು ಬೈಕ್ ಚಾಲಕ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿದ್ದನು. ಈ ವೇಳೆ ಬೈಕ್‌ನಿಂದ ಇಳಿದ ಪಾಯಲ್, ದಿಢೀರನೆ ಸೇತುವೆಯ ತುದಿಗೆ ತೆರಳಿ ತಾವು ಜೀವನ ಕೊನೆಗೊಳಿಸುತ್ತಿರುವುದಾಗಿ ಅಲ್ಲಿದ್ದವರಿಗೆ ತಿಳಿಸಿದ್ದಾರೆ.

ಆಕೆಯ ನಿರ್ಧಾರ ಕಂಡು ಆತಂಕಗೊಂಡ ಬೈಕ್ ಸವಾರ ಹಾಗೂ ಸೇತುವೆಯ ಮೇಲಿದ್ದ ಸಾರ್ವಜನಿಕರು ಆಕೆಯನ್ನು ತಡೆಯಲು ಯತ್ನಿಸಿದರು. ಕೂಡಲೇ ಬೈಕ್ ಸವಾರ ಯುವತಿಯ ತಂದೆಗೆ ಕರೆ ಮಾಡಿ ವಿಷಯ ತಿಳಿಸಿ, ಫೋನ್ ಅನ್ನು ಪಾಯಲ್‌ಗೆ ನೀಡಿದ್ದನು. ಫೋನ್‌ನಲ್ಲಿ ತಂದೆ ಎಷ್ಟೇ ಕಳಕಳಿಯಿಂದ ಮನವೊಲಿಸಲು ಯತ್ನಿಸಿದರೂ, “ಇದು ನನ್ನ ಜೀವನ, ನಾನು ಸಾಯಲು ನಿರ್ಧರಿಸಿದ್ದೇನೆ” ಎಂದು ಹೇಳಿ, ಅಂತಿಮವಾಗಿ “ಬೈ ಬೈ ಪಾಪ” ಎಂದು ಹೇಳಿ ಸೇತುವೆಯಿಂದ ಚೆನಾಬ್ ನದಿಗೆ ಧುಮುಕಿದ್ದಾಳೆ.

ಇದನ್ನೂ ಓದಿ: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಸ್ಕೇಟಿಂಗ್: ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು, ಪೊಲೀಸರು ಹಾಗೂ ರಾಜ್ಯ ವಿಪತ್ತು ಶಮನ ಪಡೆ (SDRF) ಸಿಬ್ಬಂದಿ ನದಿಗೆ ಧುಮುಕಿದ ಯುವತಿಯ ಪತ್ತೆಗಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಯುವತಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ತೀವ್ರವಾಗಿ ಮುಂದುವರಿದಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *