ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಒಂದನೇ ತರಗತಿ ದಾಖಲಾತಿಯ ವಯೋಮಿತಿಯಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಬದಲಾವಣೆ ತಂದಿದೆ. ಶಾಲಾ ದಾಖಲಾತಿಗೆ ಕಡ್ಡಾಯವಾಗಿದ್ದ 6 ವರ್ಷದ ನಿಯಮದಲ್ಲಿ 60 ದಿನಗಳ (2 ತಿಂಗಳು) ವಿನಾಯಿತಿ ನೀಡಿ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಏನಿದು ಹೊಸ ನಿಯಮ?:

ಈ ಹಿಂದೆ, ಜೂನ್ 1ಕ್ಕೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವಿತ್ತು. ಆದರೆ ಈಗಿನ ಹೊಸ ಆದೇಶದ ಪ್ರಕಾರ, ಜೂನ್ 1ಕ್ಕೆ 5 ವರ್ಷ 10 ತಿಂಗಳು ತುಂಬಿರುವ ಮಕ್ಕಳನ್ನೂ ಸಹ 1ನೇ ತರಗತಿಗೆ ದಾಖಲಿಸಿಕೊಳ್ಳಬಹುದು. ಅಂದರೆ, ಮಗುವಿನ ಜನ್ಮದಿನವು ಜೂನ್ 1ರಿಂದ ಜುಲೈ 30ರೊಳಗೆ ಇದ್ದರೂ ಸಹ ಅಂತಹ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲೇ ಶಾಲೆಗೆ ಸೇರಲು ಅವಕಾಶ ಸಿಗಲಿದೆ.
ಪೋಷಕರ ಮನವಿಗೆ ಸ್ಪಂದನೆ:

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಪ್ರಕಾರ 6 ವರ್ಷ ಕಡ್ಡಾಯಗೊಳಿಸಿದ್ದರಿಂದ ಸಾವಿರಾರು ಮಕ್ಕಳು ಒಂದು ವರ್ಷದ ಶಿಕ್ಷಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಈ ಕುರಿತು ಪೋಷಕರಿಂದ ಬಂದ ತೀವ್ರ ಒತ್ತಡ ಮತ್ತು ಮನವಿಯನ್ನು ಪುರಸ್ಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಾನವೀಯ ನೆಲೆಯಲ್ಲಿ ಈ 2 ತಿಂಗಳ ಸಡಿಲಿಕೆಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: KCET, NEET, JEE ಕನಸಿಗೆ ದಾರಿ ತೆರೆಯುವ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜು- ಮಕ್ಕಳ ಭವಿಷ್ಯಕ್ಕೆ ಸೂಕ್ತ ಆಯ್ಕೆ

ಪ್ರಮುಖ ಅಂಶಗಳು:
ಈ ಸಡಿಲಿಕೆಯು ಕೇವಲ 2026-27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿದೆ.
ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ಈ ವಿಶೇಷ ಅವಕಾಶ ನೀಡಲಾಗಿದೆ.
ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಲ್ಲಾ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ.
ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಶಾಲಾ ದಾಖಲಾತಿ ತಂತ್ರಾಂಶ (SATS) ನಲ್ಲೂ ಅಗತ್ಯ ಬದಲಾವಣೆ ಮಾಡಲು ಸೂಚಿಸಲಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

