ಉಡುಪಿ: ಸಮುದ್ರ ಮಧ್ಯದಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಪರ್ಸೀನ್ ಬೋಟ್ವೊಂದು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿ ಬಿರುಕು ಬಿಟ್ಟು ಮುಳುಗಲಾರಂಭಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಸಮೀಪ ಸಂಭವಿಸಿದೆ. ಬೋಟ್ನಲ್ಲಿದ್ದ 30 ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಗಂಗೊಳ್ಳಿ ಬಂದರಿನಿಂದ ಸುಮಾರು 3 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ರಾಕ್ಷಸ ಅಲೆಗಳ ರಭಸಕ್ಕೆ ಬೋಟ್ನ ತಳಭಾಗದಲ್ಲಿ ದಿಢೀರ್ ಬಿರುಕು ಕಾಣಿಸಿಕೊಂಡಿದೆ. ಬೋಟ್ಗೆ ಬಿರುಕು ಬೀಳುತ್ತಿದ್ದಂತೆಯೇ ಸಮುದ್ರದ ನೀರು ವೇಗವಾಗಿ ಒಳನುಗ್ಗಲು ಪ್ರಾರಂಭಿಸಿ, ಬೋಟ್ ಮುಳುಗಲಾರಂಭಿಸಿತು. ಇದರಿಂದ ಬೋಟ್ನಲ್ಲಿದ್ದ ಮೀನುಗಾರರು ಜೀವಭಯದಿಂದ ಕಂಗಾಲಾಗಿದ್ದರು.
ಇದನ್ನೂ ಓದಿ: ಆರ್ಆರ್ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಮಾಹಿತಿ ತಿಳಿಯುತ್ತಿದ್ದಂತೆಯೇ ಕರಾವಳಿ ಮೀಸಲು ಪಡೆಯ ಇನ್ಸ್ಪೆಕ್ಟರ್ ರಮೇಶ್ ಕೆ (Ramesh K) ಅವರ ನೇತೃತ್ವದಲ್ಲಿ ಕರಾವಳಿ ಕಾವಲು ಪಡೆ (Coastal Security Police) ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಸ್ಥಳೀಯ ಮೀನುಗಾರರ ಸಕಾಲಿಕ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಪಡೆಯು ಬೋಟ್ನಲ್ಲಿದ್ದ ಎಲ್ಲಾ 30 ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿ, ಸುರಕ್ಷಿತವಾಗಿ ಗಂಗೊಳ್ಳಿ ತೀರಕ್ಕೆ ಕರೆತಂದಿದೆ. ಯಾವುದೇ ಪ್ರಾಣಹಾನಿ ಸಂಭವಿಸದೇ ಎಲ್ಲಾ ಮೀನುಗಾರರು ಸುರಕ್ಷಿತವಾಗಿ ದಡ ಸೇರಿರುವುದರಿಂದ ಪೋಷಕರು ಹಾಗೂ ಮೀನುಗಾರಿಕಾ ಸಮುದಾಯ ನಿಟ್ಟುಸಿರು ಬಿಟ್ಟಿದೆ.

