ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ನೌಕರರ ಯೂನಿಯನ್ನ ವಾರ್ಷಿಕ ಮಹಾಸಭೆ ಮತ್ತು ಯೂನಿಯನ್ನ ನೂತನ ಪದಾಧಿಕಾರಿಗಳ ಚುನಾವಣೆ ಪುತ್ತೂರಿನ ಟೌನ್ಬ್ಯಾಂಕ್ ಸಭಾಂಗಣದಲ್ಲಿ ಜ.26 ರಂದು ನಡೆಯಿತು.
ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಒಟ್ಟು ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಏಳು ಮಂದಿಯನ್ನು ಪದಾಧಿಕಾರಿಗಳ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಬೆಳಗ್ಗೆ 8.30ಕ್ಕೆ ಮತದಾನ ಪ್ರಕ್ರಿಯೆ ಆರಂಭಗೊಂಡು ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಂಡಿತು. 1.30ರ ವೇಳೆಗೆ ಚುನಾಯಿತರನ್ನು ಘೋಷಿಸಲಾಯಿತು. ಕ್ಯಾಂಪ್ಕೋದ ಸಿಬ್ಬಂದಿಯಾಗಿರುವ ರವಿ ಎಂ. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಚುನಾವಣಾ ಸಿಬ್ಬಂದಿಯಾಗಿ ವಿನೀತ್ ಹಾಗೂ ಪುಷ್ಪರಾಜ್ ಚುನಾವಣಾ ಪ್ರಕ್ರಿಯಾ ಕಾರ್ಯಗಳನ್ನು ನಡೆಸಿಕೊಟ್ಟರು.


ಅದರಂತೆ, ತೀರ್ಥರಾಮ ಎಸ್ ಅವರು 200 ಮತಗಳನ್ನು ಪಡೆದಿದ್ದು, ಬಾಲಕೃಷ್ಣ ಪಿ.ಆರ್. 181, ಪ್ರಕಾಶ ಎ 175, ರಾಧಕೃಷ್ಣ ರೈ 150, ಅನಂತಕೃಷ್ಣ ಟಿ 147, ಗಂಗಾಧರ ಬಿ 126, ಲೋಹಿತ್ ಕುಮಾರ್ ಕೆ 122 ಮತಗಳನ್ನು ಪಡೆದು ಪದಾಧಿಕಾರಿಗಳ ಸ್ಥಾನಕ್ಕೆ ಆಯ್ಕೆಯಾದರು. ಇವರು ಎರಡು ವರ್ಷಗಳಿಗೆ ಚುನಾಯಿತರಾಗಿದ್ದಾರೆ. ಇನ್ನುಳಿದಂತೆ ಸಚಿನ್ ಎ 109 ಮತಗಳನ್ನು ಪಡೆದರೆ, ಧನಂಜಯ ಕೆ 106, ಪ್ರಶಾಂತ್ ಬಿ 89, ಪವನ್ ಕುಮಾರ್ ಬಿ 86 ಮತ್ತು ಪ್ರಶಾಂತ್ 78 ಮತಗಳನ್ನು ಪಡೆದರು.
ಇದನ್ನೂ ಓದಿ: ಸರಸ್ವತಿ ಸೌಹಾರ್ದ ಚುನಾವಣೆ: ಸತೀಶ್ಚಂದ್ರ ತಂಡ ಕ್ಲೀನ್ ಸ್ವೀಪ್, ಯಾರ್ಯಾರಿಗೆ ಎಷ್ಟೆಷ್ಟು ಮತ?

ಪ್ರತಿ ವರ್ಷದಂತೆ ಜ. 26ರಂದು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ನಡೆಯುತ್ತದೆ. ಬೆಳಗ್ಗೆ 10 ಗಂಟೆಗೆ ನಡೆದ ಪಿಂಚಣಿ ವಿಷಯದ ಬಗ್ಗೆ ಕ್ಯಾಂಪ್ಕೋದ ಮುಖ್ಯಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಪ್ರೇಮ್ ಜಿ ಅವರು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಚೀಫ್ ಮ್ಯಾಜೇರ್ ಮೋನಪ್ಪ ಸಪಲ್ಯ ಅವರು ಈ ವೇಳೆ ಉಪಸ್ಥಿತರಿದ್ದರು. 11 ಗಂಟೆಗೆ ಯೂನಿಯನ್ನ ಕಾನೂನು ಸಲಹೆಗಾರ ಮಹೇಶ್ ಕೆಜೆ ಅವರು ಯೂನಿಯನ್ನ ಮಹತ್ವ, ಅಗತ್ಯತೆ, ಅನಿವಾರ್ಯತೆ, ಸಕ್ರಿಯ ಒಳಗೊಳ್ಳುವಿಕೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಯೂನಿಯನ್ನ ವಾರ್ಷಿಕ ಮಹಾಸಭೆ
ಬಳಿಕ ಯೂನಿಯನ್ನ ಮಹಾಸಭೆ ನಡೆಯಿತು. ಕಾರ್ಯದರ್ಶಿ ಪ್ರಕಾಶ್ ಎ ವರದಿ ಮಂಡಿಸಿದರು. ಖಂಜಾಚಿ ಬಾಲಕೃಷ್ಣ ಪಿ.ಆರ್. ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ ಕ್ಯಾಂಪ್ಕೋದ ನಿವೃತ್ತ ನೌಕರರು ಹಾಗೂ ಯೂನಿಯನ್ನ ಸದಸ್ಯರಾದ 13 ಮಂದಿಯನ್ನು ಹಿಂದೂ ಮಜ್ದೂರು ಸಭಾದ (ಹೆಚ್ಎಂಎಸ್) ಗೌರವಾಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ, ಹೆಚ್ಎಂಎಸ್ನ ಅಶೋಕ್ ಶೆಟ್ಟಿ ಹಾಗೂ ನ್ಯಾಯವಾದಿ ಮಹೇಶ್ ಕಜೆ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಯೂನಿಯನ್ನ ಅಧ್ಯಕ್ಷ ಸಂತೋಷ್ ಕುಮಾರ್ ಸಿಎಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೂನಿಯನ್ನ ಗೌರವಾಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ ಅವರು, ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಯೂನಿಯನ್ ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಹೇಳಿ ಶುಭಹಾರೈಸಿದರು. ಯೂನಿಯನ್ನ ಸದಸ್ಯರಾದ ತೀರ್ಥರಾಮ ಎಸ್. ಸ್ವಾಗತಿಸಿ, ಸಂತೋಷ್ ವಂದಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

