ಪಶ್ಚಿಮ ಬಂಗಾಳದ ಈಸ್ಟ್ ಮಿದ್ನಾಪುರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದ 14 ವರ್ಷದ ಬಾಲಕಿ, ಐಸಿಯು ಆಂಬ್ಯುಲೆನ್ಸ್ ತಾಂತ್ರಿಕನ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾಳೆ.
ಈ ಘಟನೆ ಎರಾಫಾತ್ಪುರ ಗ್ರಾಮದಲ್ಲಿ ನಡೆದಿದೆ. ಕುಟುಂಬದೊಂದಿಗೆ ವಿದ್ಯಾಭ್ಯಾಸದ ವಿಚಾರದಲ್ಲಿ ಉಂಟಾದ ಜಗಳದ ನಂತರ ಬಾಲಕಿ ಕೀಟನಾಶಕ ಸೇವಿಸಿದ್ದಾಳೆ. ತಕ್ಷಣವೇ ಆಕೆಯನ್ನು ತಮ್ಲುಕಿನ ಖಾಸಗಿ ನರ್ಸಿಂಗ್ ಹೋಮ್ಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.

ಕುಟುಂಬದವರು ಮತ್ತೊಂದು ಆಸ್ಪತ್ರೆಗೆ ಕೊಂಡೊಯ್ದು ಪರೀಕ್ಷಿಸಿದಾಗ ಅಲ್ಲಿನ ವೈದ್ಯರೂ ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಹೀಗಾಗಿ ಆಕೆಯ ಅಂತ್ಯಸಂಸ್ಕಾರಕ್ಕೆ ಎಲ್ಲಾ ತಯಾರಿಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. ಮರಣದ ಬಗ್ಗೆ ಮೈಕ್ನಲ್ಲಿ ಪ್ರಕಟಿಸಲಾಗಿದ್ದು, ಸಮಾಧಿ ತೋಡುವ ಕೆಲಸವೂ ಆರಂಭವಾಗಿತ್ತು.
ಇದನ್ನೂ ಓದಿ: ತ್ರಿಕೋನ ಪ್ರೇಮ: ಹಳೆ ಗರ್ಲ್ಫ್ರೆಂಡ್ ಜೊತೆ ಸೇರಿ ಪ್ರಿಯತಮೆಯ ಗುಂಡಿಕ್ಕಿ ಕೊಂದ ಲವ್ವರ್
ಈ ವೇಳೆ ಐಸಿಯು ಆಂಬ್ಯುಲೆನ್ಸ್ ತಾಂತ್ರಿಕ ರಬೀಂದ್ರನಾಥ ಮಂಡಲ್ ಬಾಲಕಿಯ ದೇಹದಲ್ಲಿ ಮಂದವಾದ ನಾಡಿಮಿಡಿತವನ್ನು ಗಮನಿಸಿದರು. ತಕ್ಷಣವೇ ಆಕೆಯನ್ನು ಕಾಂತೈ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಾಯಿಸಿದರು. ಅಲ್ಲಿ ಐಸಿಯುಗೆ ದಾಖಲಿಸಿ ತೀವ್ರ ಚಿಕಿತ್ಸೆಯನ್ನು ನೀಡಲಾಗಿತು. ಏಳು ದಿನಗಳ ನಿರಂತರ ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ.
“ಲಿಖಿತ ದೂರು ಬಂದರೆ, ಮೃತಳಾಗಿದ್ದಾಳೆ ಎಂದು ಘೋಷಿಸಿದ ವೈದ್ಯರ ವಿರುದ್ಧ ತನಿಖೆ ನಡೆಸಲಾಗುತ್ತದೆ. ನಮ್ಮ ಆಂಬ್ಯುಲೆನ್ಸ್ ತಾಂತ್ರಿಕನ ಎಚ್ಚರಿಕೆಯಿಂದ ಒಂದು ಅಮೂಲ್ಯ ಜೀವ ಉಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಚೇತರಿಸಿಕೊಂಡ ಬಾಲಕಿ ಆಸ್ಪತ್ರೆಯ ಸಿಬ್ಬಂದಿಗೆ ಹಾರ ಹಾಕಿ ಕೃತಜ್ಞತೆ ಸಲ್ಲಿಸಿದ್ದಾಳೆ. ಈ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿಯ ಜಾಗ್ರತೆಯ ಮಹತ್ವವನ್ನು ಒತ್ತಿ ಹೇಳುತ್ತಿದೆ. ಒಂದು ಕ್ಷಣದ ಎಚ್ಚರಿಕೆ ಜೀವ ಉಳಿಸಬಹುದು ಎಂಬುದಕ್ಕೆ ಇದು ಜೀವಂತ ಉದಾಹರಣೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

