ಬೆಂಗಳೂರು: ನವೆಂಬರ್ ಕ್ರಾಂತ್ರಿ ನಂತರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕ್ರಾಂತಿಯಾಗಲಿದೆ ಎಂದು ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ರಾಜ್ಯದ ಅತ್ಯಂತ ದೀರ್ಘಾವಧಿಯವರೆಗೆ ಮುಖ್ಯಮಂತ್ರಿ ಹುದ್ದೆ ಏರಿದವರು ಎಂಬ ಖ್ಯಾತಿಗೆ ಒಳಗಾದ ಸಿದ್ದರಾಮಯ್ಯ ಅವರು, “ಇನ್ನೆಷ್ಟು ದಿನ ಅಧಿಕಾರಿದಲ್ಲಿ ಇರುತ್ತೇನೋ” ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರಿ ಕುತೂಹಲ ಕೆರಳಿಸಿದ್ದು, ವಿಪಕ್ಷ ಬಿಜೆಪಿ ಪಾಲಿಗೆ ಅಸ್ತ್ರ ಸಿಕ್ಕಂತಾಗಿದೆ.
ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಎಕ್ಸ್ ಪೋಸ್ಟ್ ಮಾಡಿದ ರಾಜ್ಯ ಬಿಜೆಪಿ, ಸಿಎಂ ಬದಲಾವಣೆಯ ಸ್ಪಷ್ಟ ಸಂದೇಶ ಎಂದು ಹೇಳಿಕೊಂಡಿದೆ. “ಅತಿ ಸುದೀರ್ಘಾವಧಿಯ ಸಿಎಂ ಎಂದೆನಿಸಿಕೊಂಡ ದಿನವೇ ಸಿಎಂ ಸಿದ್ದರಾಮಯ್ಯ ಅವರ ಮಾತಿನ ಧಾಟಿ ಬದಲಾಗಿದೆ. ಸಿಎಂ ಕುರ್ಚಿ ಕಿತ್ತಾಟದ ನಡುವೆ “ಎಷ್ಟು ದಿನ ಇರ್ತೀನೋ ಗೊತ್ತಿಲ್ಲ” ಎಂದಿರುವುದು ಸಿಎಂ ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ ಎಂದು ಪೋಸ್ಟ್ ಮಾಡಿದೆ.

ಇದನ್ನೂ ಓದಿ: ದೇವರಾಜು ಅರಸು ಅಧಿಕಾರಾವಧಿ ದಾಖಲೆ ಮುರಿದ ಸಿದ್ದರಾಮಯ್ಯ; ರಾಜ್ಯದ ದೀರ್ಘಾವಧಿ ಸಿಎಂ
ಅಲ್ಲದೆ, “ನುಡಿದಂತೆ ನಡೆಯಬೇಕು, ನೀಡಿದ ಮಾತಿನಂತೆ ನಡೆದುಕೊಳ್ಳುವುದು ಅತಿದೊಡ್ಡ ಧರ್ಮ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಟಿ ಬೀಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಅನುಮಾನದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ಸಿನ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಕ್ಷರಶಃ ಬಡವಾಗಿದೆ. ಬಸ್ ಪ್ರಯಾಣ ಒಂದು ಬಿಟ್ಟರೆ ಬೇರಾವ ಯೋಜನೆಗಳೂ ಸರಿಯಾಗಿ ಜನರಿಗೆ ತಲುಪುತ್ತಿಲ್ಲ, ಹೊಸ ಯೋಜನೆಗಳಂತೂ ಗಗನಕುಸುಮವಾಗಿದೆ.” ಎಂದು ಟೀಕಿಸಿದೆ.
ಅತಿ ಸುದೀರ್ಘಾವಧಿಯ ಸಿಎಂ ಎಂದೆನಿಸಿಕೊಂಡ ದಿನವೇ ಸಿಎಂ @siddaramaiah ಅವರ ಮಾತಿನ ಧಾಟಿ ಬದಲಾಗಿದೆ. ಸಿಎಂ ಕುರ್ಚಿ ಕಿತ್ತಾಟದ ನಡುವೆ “ಎಷ್ಟು ದಿನ ಇರ್ತೀನೋ ಗೊತ್ತಿಲ್ಲ” ಎಂದಿರುವುದು ಸಿಎಂ ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ.
ನುಡಿದಂತೆ ನಡೆಯಬೇಕು, ನೀಡಿದ ಮಾತಿನಂತೆ ನಡೆದುಕೊಳ್ಳುವುದು ಅತಿದೊಡ್ಡ ಧರ್ಮ ಎಂದು ಪರೋಕ್ಷವಾಗಿ ಡಿಸಿಎಂ… pic.twitter.com/halKefjVDS
— BJP Karnataka (@BJP4Karnataka) January 8, 2026
ಸಿದ್ದರಾಮಯ್ಯ ಹೇಳಿದ್ದೇನು?
ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎಂದೆನಿಸಿಕೊಂಡಿರುವ ಸಿದ್ದರಾಮಯ್ಯ ಅವರು, ಜನರ ಆಶೀರ್ವಾದದಿಂದ ಇಲ್ಲಿವರೆಗೆ ಬಂದಿದ್ದೇನೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ, ನನ್ನ ಆಡಳಿತದ ಬಗ್ಗೆ ನನಗೆ ತೃಪ್ತಿ ಇದೆ. ಅನ್ನಭಾಗ್ಯ, ಕೃಷಿ ಭಾಗ್ಯ, ರೈತರಿಗೆ ಮನಸ್ವಿ ಯೋಜನೆ, ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹ ಜ್ಯೋತಿ ಇತ್ಯಾದಿ ಯೋಜನೆಗಳನ್ನು ಕೊಟ್ಟಿದ್ದೇನೆ. ಪ್ರತಿ ವರ್ಷ 3 ಲಕ್ಷ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದೆ. 14.52 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

