ಮೈಸೂರು: ಪ್ರವಾಸಿ ನಗರಿ ಮೈಸೂರಿನಲ್ಲಿ ಅತ್ಯಂತ ಆಘಾತಕಾರಿ ಪ್ರಕರಣವೊಂದು ಬಯಲಿಗೆ ಬಂದಿದ್ದು, ಯುವಕನೋರ್ವನನ್ನು ಅಪಹರಿಸಿ ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ದಂಧೆಗೆ ಬಳಸಿಕೊಂಡಿರುವ ಕರಾಳ ದಂಧೆ ಬೆಳಕಿಗೆ ಬಂದಿದೆ. ನಂಜನಗೂಡಿನ ಯುವಕ ಅನಿಲ್ ಕುಮಾರ್ ಈ ಕರಾಳ ಜಾಲದ ಬಲಿಪಶುವಾಗಿದ್ದು, ಇದೀಗ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕೆಲವು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿಗೆ ಓಲೆ-ಮೂಗುಬಟ್ಟು ಹಾಕಿ ‘ಅಕ್ಷತಾ’ ಎಂದು ಹೆಸರಿಟ್ಟು ವೇಷ ಬದಲಿಸಿದ್ದರು.

ಯುವಕ ಅನಿಲ್ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ ಸಾವಿರಾರು ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿತ್ತು. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಲವ್ ಜಿಹಾದ್ ಸಂಚಲನ: ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ, ಸಿಡಿದೆದ್ದ ಕೇಸರಿ ಪಡೆ!

ಈ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ ಹಣ ಕೇಳಿದಾಗ ಅನಿತಾ ಉಲ್ಟಾ ಹೊಡೆದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನ್ಯಾಯಕ್ಕಾಗಿ ಲಷ್ಕರ್ ಠಾಣೆಗೆ ದೂರು ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


