ನಾಂದೇಡ್: ಸಾಮಾನ್ಯವಾಗಿ ಶ್ರೀಮಂತರ ಮದುವೆ ಎಂದರೆ ಅದ್ಧೂರಿ ಹೂವಿನ ಹಾರಗಳು, ಭರ್ಜರಿ ಬ್ಯಾಂಡ್ ಸೆಟ್, ಡಿಜೆ ಮ್ಯೂಸಿಕ್ ಹಾಗೂ ಪಂಚಭಕ್ಷ್ಯ ಪರಮಾನ್ನಗಳ ಊಟ ನೆನಪಿಗೆ ಬರುತ್ತದೆ. ಮದುವೆಗೆ ಬಂದ ನೆಂಟರಿಷ್ಟರಿಗೆ ತೆಂಗಿನಕಾಯಿ, ತಾಂಬೂಲ ಇಲ್ಲವೇ ಬೆಳ್ಳಿ ನಾಣ್ಯಗಳನ್ನು ರಿಟರ್ನ್ ಗಿಫ್ಟ್ ಆಗಿ ನೀಡುವುದು ಸಂಪ್ರದಾಯ. ಆದರೆ ಮಹಾರಾಷ್ಟ್ರದ ಬಹಾದರಪುರ ಗ್ರಾಮದಲ್ಲಿ ನಡೆದ ವಿವಾಹವೊಂದರಲ್ಲಿ, ವರನ ಕಡೆಯವರು ನೀಡಿದ ರಿಟರ್ನ್ ಗಿಫ್ಟ್ ಕಂಡು ಇಡೀ ದೇಶವೇ ಮೂಗಿನ ಮೇಲೆ ಬೆರಳಿಟ್ಟಿದೆ!
ಹೌದು, ವರ ಸಿದ್ದೇಶ್ವರ್ ಪೇಠ್ಕರ್ ಮತ್ತು ಅವರ ಕುಟುಂಬಸ್ಥರು ತಮ್ಮ ಮದುವೆಯ ನೆನಪಿಗಾಗಿ ಇಡೀ ಹಳ್ಳಿಯ ಒಟ್ಟು 3,465 ನಿವಾಸಿಗಳಿಗೆ ತಲಾ 1 ಲಕ್ಷ ರೂಪಾಯಿಯಂತೆ ಒಟ್ಟು 34.6 ಕೋಟಿ ರೂಪಾಯಿ ಮೌಲ್ಯದ ಅಪಘಾತ ವಿಮಾ ರಕ್ಷಣೆಯನ್ನು (Accident Insurance Coverage) ಉಡುಗೊರೆಯಾಗಿ ನೀಡಿದ್ದಾರೆ!
ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ನಾಂದೇಡ್ನಿಂದ ಸುಮಾರು 55 ಕಿಮೀ ದೂರದಲ್ಲಿರುವ ಕಂಧಾರ್ ತಾಲೂಕಿನ ಬಹಾದರಪುರ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಗ್ರಾಮದ ಯಾವುದೇ ಒಬ್ಬ ಅರ್ಹ ವ್ಯಕ್ತಿಯೂ ಈ ಯೋಜನೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪೇಠ್ಕರ್ ಕುಟುಂಬವು ಒಂದು ಮಾಸ್ಟರ್ ಪ್ಲಾನ್ ಮಾಡಿತ್ತು.
ಇದನ್ನೂ ಓದಿ:Viral: ಜೈಲಿನೊಳಗೆ ಪ್ರಿಯಕರನ ಜೊತೆ ರೀಲ್ಸ್ ಮಾಡಿದ ಯುವತಿ
ಅವರು ಗ್ರಾಮ ಪಂಚಾಯಿತಿಯ ಹೆಸರಿನಲ್ಲಿ ಗ್ರೂಪ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯನ್ನು (Group Accident Insurance Policy) ಖರೀದಿಸಿದರು. ಯಾವುದೇ ಕಾಗದ ಪತ್ರಗಳ ಕಿರಿಕಿರಿ ಇರಬಾರದು ಎಂದು ನೇರವಾಗಿ ಗ್ರಾಮದ ಮತದಾರರ ಪಟ್ಟಿಯನ್ನೇ (Voters List) ವಿಮಾ ಕಂಪನಿಗೆ ಸಲ್ಲಿಸಿದರು. ಇದರ ಪರಿಣಾಮವಾಗಿ, ಗ್ರಾಮದ ಪ್ರತಿಯೊಬ್ಬ ಅರ್ಹ ನಿವಾಸಿಯೂ ಯಾವುದೇ ತಾರತಮ್ಯವಿಲ್ಲದೆ ಸ್ವಯಂಚಾಲಿತವಾಗಿ 1 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮಾ ಸುರಕ್ಷತೆಯನ್ನು ಪಡೆದುಕೊಂಡಿದ್ದಾರೆ.
ಮದುವೆಯ ಅನಗತ್ಯ ದುಬಾರಿ ವೆಚ್ಚಗಳಿಗೆ ಬ್ರೇಕ್ ಹಾಕಿ, ಇಡೀ ಗ್ರಾಮದ ಭವಿಷ್ಯಕ್ಕೆ ರಕ್ಷಣೆ ನೀಡಿದ ಸಿದ್ದೇಶ್ವರ್ ಪೇಠ್ಕರ್ ಕುಟುಂಬದ ಈ ಸಾಮಾಜಿಕ ಕಳಕಳಿಗೆ ಈಗ ದೇಶಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


