ಮಂಗಳೂರು: ಅಖಿಲ ಭಾರತ ಗೇರು ಬೆಳಗಾರರ ಸಂಘದ ವತಿಯಿಂದ ಕ್ಯಾಂಪ್ಕೋ (CAMPCO) ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಗೇರು ಬೆಳೆಗಾರರ ಹಿತರಕ್ಷಣೆ ಮತ್ತು ಮಾರುಕಟ್ಟೆ ವಿಸ್ತರಣೆಯ ಕುರಿತು ಈ ಸಂದರ್ಭದಲ್ಲಿ ಮಹತ್ವದ ಚರ್ಚೆಗಳು ನಡೆದವು. ಸನ್ಮಾನದ ಬಳಿಕ ಸಂಘದ ಪದಾಧಿಕಾರಿಗಳು ಕ್ಯಾಂಪ್ಕೋ ಅಧ್ಯಕ್ಷರಿಗೆ ಗೇರು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಖಾಸಗಿ ವ್ಯಾಪಾರಸ್ಥರು ಮಾತ್ರ ಗೇರು ಖರೀದಿಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಬೆಳೆಗಾರರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ ಮತ್ತು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಸಹಕಾರಿ ತತ್ವದಡಿ ಕ್ಯಾಂಪ್ಕೋ ಸಂಸ್ಥೆಯು ಮುಂದಿನ ದಿನಗಳಲ್ಲಿ ಗೇರು ಖರೀದಿಯನ್ನು ಆರಂಭಿಸಬೇಕು ಎಂದು ವಿಜ್ಞಾಪನೆ ಮಾಡಲಾಯಿತು.

ಇದನ್ನೂ ಓದಿ: ರಬ್ಬರ್ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ; ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ
ಗೇರು ಬೆಳೆಯ ಆಧುನಿಕ ಪದ್ಧತಿ ಮತ್ತು ಬೆಳೆಯ ವಿಸ್ತರಣೆಯ ಬಗ್ಗೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲು ‘ಒಂದು ದಿನದ ಕಾರ್ಯಾಗಾರ’ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕೆ ಕ್ಯಾಂಪ್ಕೋ ಸಂಸ್ಥೆಯು ತಾಂತ್ರಿಕ ಮತ್ತು ಸಾಂಸ್ಥಿಕ ಸಹಕಾರ ನೀಡಬೇಕೆಂದು ಯಾಚಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಗೇರು ಬೆಳಗಾರರ ಸಂಘದ ಅಧ್ಯಕ್ಷರಾದ ಎಂ.ಜಿ. ನಾಯಕ್ ಹಾಗೂ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು, ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಕ್ಯಾಂಪ್ಕೋದ ಪಾತ್ರದ ಬಗ್ಗೆ ಒತ್ತಿಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

