ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ನೂರಾರು ಕನ್ನಡಿಗರು ಅತಂತ್ರರಾಗಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ, ಕೂಡಲೇ ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಯುದ್ಧದ ಕಾರಣ ವಿಮಾನಗಳು ರದ್ದಾಗಿರುವುದರಿಂದ ಕರ್ನಾಟಕದ ವಿವಿಧ ಜಿಲ್ಲೆಗಳ (ಬಳ್ಳಾರಿ, ಬೆಂಗಳೂರು, ದಕ್ಷಿಣ ಕನ್ನಡ ಇತ್ಯಾದಿ) ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ದುಬೈ ಏರ್ಪೋರ್ಟ್ನಲ್ಲಿ ಸರಿಯಾದ ಆಹಾರ, ನೀರು ಮತ್ತು ವಸತಿ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ (Indian Embassy) ಮೂಲಕ ಸಿಲುಕಿರುವವರಿಗೆ ತಕ್ಷಣದ ನೆರವು ನೀಡಲು ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನಿಗಳಲ್ಲಿ ಮನವಿ ಮಾಡಿದ್ದಾರೆ. ವಾಯುನೆಲೆಗಳು ಭಾಗಶಃ ತೆರೆದ ತಕ್ಷಣ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ‘ಏರ್ ಇಂಡಿಯಾ’ ಅಥವಾ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.

ಇದನ್ನೂ ಓದಿ: ಇರಾನ್ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ: ಟ್ರಂಪ್ ಎಚ್ಚರಿಕೆಯಿಂದ ಪಾಕ್ ಪ್ರಧಾನಿ ಕಂಗಾಲು!
ರಾಜ್ಯ ಸರ್ಕಾರವು ಈಗಾಗಲೇ ಸಹಾಯವಾಣಿ ತೆರೆದಿದ್ದು, ಕೇಂದ್ರದ ಅಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಹಣಕಾಸಿನ ನೆರವು ಮತ್ತು ಅನಾರೋಗ್ಯಕ್ಕೊಳಗಾದ ಪ್ರಯಾಣಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ರಾಯಭಾರ ಕಚೇರಿಗೆ ಆದೇಶಿಸುವಂತೆ ವಿನಂತಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

