ಉಡುಪಿ : ಕರಾವಳಿ ಭಾಗದ ಜನರ ಬಹುಕಾಲದ ನ್ಯಾಯಾಂಗ ಕನಸಾಗಿರುವ ‘ಕರ್ನಾಟಕ ಹೈಕೋರ್ಟ್ ಪೀಠ’ವನ್ನು (Coastal High Court Bench) ಉಡುಪಿ ಅಥವಾ ಮಂಗಳೂರು ಭಾಗದಲ್ಲಿ ಸ್ಥಾಪಿಸಬೇಕೆಂಬ ಆಗ್ರಹ ಮತ್ತೆ ತೀವ್ರಗೊಂಡಿದೆ. ಈ ಕುರಿತು ‘ಟೀಮ್ ಯು-ಆಕ್ಟ್’ (Team U-ACT) ಹಾಗೂ ‘ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ’ ವತಿಯಿಂದ ರಾಜ್ಯಸಭಾ ಸಂಸದರೂ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಎಂ. ನಾಗರಾಜ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಯಿತು.
ಸೆಪ್ಟೆಂಬರ್ ೬ರಂದು ಉಡುಪಿಗೆ ಆಗಮಿಸಿದ್ದ ಸಂಸದ ಡಾ. ಎಂ. ನಾಗರಾಜ್ ಅವರನ್ನು ಭೇಟಿಯಾದ ಹೋರಾಟ ಸಮಿತಿಯ ನಿಯೋಗವು, ಕರಾವಳಿ ಜಿಲ್ಲೆಗಳ ಜನರಿಗೆ ನ್ಯಾಯಾಂಗ ವ್ಯವಸ್ಥೆಯನ್ನು ತಲುಪಿಸಲು ಎದುರಾಗುತ್ತಿರುವ ಪ್ರಾಯೋಗಿಕ ಸವಾಲುಗಳು ಮತ್ತು ಹೈಕೋರ್ಟ್ ಪೀಠದ ಅಗತ್ಯತೆಯ ಕುರಿತು ವಿಸ್ತೃತವಾಗಿ ಚರ್ಚಿಸಿತು.
ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾರ್ವಜನಿಕರು ಮತ್ತು ವಕೀಲರು ಹೈಕೋರ್ಟ್ ಮೆಟ್ಟಿಲೇರಲು ನೂರಾರು ಕಿಲೋಮೀಟರ್ ದೂರದ ಬೆಂಗಳೂರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಕರಾವಳಿಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಸಾರ್ವಜನಿಕರಿಗೆ ಸಮಯ ಹಾಗೂ ಆರ್ಥಿಕ ಹೊರೆ ಅಪಾರ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
ಸಾಮಾನ್ಯ ಜನರಿಗೂ ಶೀಘ್ರ ಹಾಗೂ ಸುಲಭವಾಗಿ ನ್ಯಾಯಾಂಗ ಸೇವೆಗಳು ದೊರೆಯಲು ಇದು ನೆರವಾಗಲಿದೆ. ಕರಾವಳಿ ಭಾಗದ ಈ ಬಹುಕಾಲದ ಬೇಡಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತರಬೇಕು. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು, ಕೇಂದ್ರ ಕಾನೂನು ಸಚಿವಾಲಯ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಶೀಘ್ರದಲ್ಲೇ ಉನ್ನತ ಮಟ್ಟದ ಚರ್ಚೆ ನಡೆಸಬೇಕು. ಸಂಸತ್ತಿನಲ್ಲಿ ಮತ್ತು ಸೂಕ್ತ ಆಡಳಿತಾತ್ಮಕ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಶ್ರಮಿಸಬೇಕು.
ಹೋರಾಟ ಸಮಿತಿಯ ಪ್ರತಿನಿಧಿಗಳ ಮನವಿ ಸ್ವೀಕರಿಸಿದ ಸಂಸದ ಡಾ. ಎಂ. ನಾಗರಾಜ್ ಅವರು, ಈ ವಿಚಾರವಾಗಿ ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.

