ಕ್ರೈಂ : ಪತ್ನಿಯನ್ನು ತನ್ನ ಪ್ರೇಯಸಿಯ ಸಹಾಯದಿಂದ ಹತ್ಯೆ ಮಾಡಿ, ಆಕೆಯ ಶವವನ್ನು ಪ್ರೇಯಸಿಯ ಗ್ರಾಮದ ಬಳಿ ಹೂತು ಹಾಕಿದ ಆರೋಪದಲ್ಲಿ ಪತಿ ಸಿಲುಕಿದ್ದಾನೆ. ಅಪರಾಧವನ್ನು ಮರೆಮಾಚಲು ಅದೇ ಸ್ಥಳದಲ್ಲಿ ನಾಯಿಯನ್ನೂ ಕೊಂದು ಹೂತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಅನುಮಾನ ಹುಟ್ಟಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ;

ಮೃತ ಮಹಿಳೆಯನ್ನು ಪ್ರಿಯಾಂಕಾ ದೇವಿ ( ಪೂಜಾ (25)) ಎಂದು ಗುರುತಿಸಲಾಗಿದ್ದು, ಆಕೆ ಪಾಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮದ ನಿವಾಸಿಯಾಗಿದ್ದು, ಕೌಡಿಯಾ ಭುಖ್ಲಾ ಗ್ರಾಮದ ಅಂಜಿತ್ ಮೇಹ್ತಾನ್ನು ವಿವಾಹವಾಗಿದ್ದರು. ದಂಪತಿಗಳು ಸುಮಾರು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 26ರಂದು ಪ್ರಿಯಾಂಕಾ ಕಾಣೆಯಾಗಿದ್ದು, ಸುಮಾರು ಒಂದು ವಾರದ ಬಳಿಕ ಗ್ರಾಮಸ್ಥರಿಗೆ ಅನುಮಾನ ಹುಟ್ಟಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದರು. ಗುರುವಾರ ಜೆಸಿಬಿ ಯಂತ್ರದ ಸಹಾಯದಿಂದ ತುಕ್ಬೇರಾ ಗ್ರಾಮದ ಬಂಜರು ಜಮೀನಿನಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಬಿಷ್ರಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಿಷಿಕೇಶ್ ದುಬೆ ಮಾತನಾಡಿ, “ಅಪರಾಧ ಹಲವು ದಿನಗಳವರೆಗೆ ಪತ್ತೆಯಾಗದೆ ಉಳಿದಿತ್ತು. ದುರ್ವಾಸನೆ ಬಂದಾಗ ಅದು ನಾಯಿಯ ಶವದಿಂದ ಬರುತ್ತಿದೆ ಎಂದು ಭ್ರಮೆ ಉಂಟಾಗುವಂತೆ ಆರೋಪಿ ನಾಯಿಯನ್ನೂ ಕೊಂದು ಅದೇ ಸ್ಥಳದಲ್ಲಿ ಹೂತಿದ್ದಾನೆ,” ಎಂದು ಹೇಳಿದರು. ಈ ಗ್ರಾಮದಲ್ಲಿ ಆರೋಪಿಯ ಪ್ರೇಯಸಿ ಸೇರಿದ್ದಾಳೆ ಎಂದು ತಿಳಿದುಬಂದಿದೆ.

ಪೊಲೀಸ್ ತನಿಖೆಯ ಪ್ರಕಾರ, ಮಹಿಳೆಯನ್ನು ಹತ್ಯೆ ಮಾಡಿದ ದಿನವೇ ಶವವನ್ನು ಹೂತು ಹಾಕಲಾಗಿದೆ. ಆರಂಭದಲ್ಲಿ ಯಾರಿಗೂ ಅನುಮಾನವಾಗಿರಲಿಲ್ಲ. ಮಹಿಳೆ ಕಾಣೆಯಾದ ಬಳಿಕ ಆಕೆಯ ಕುಟುಂಬದವರು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಫೋನ್ ಲಭ್ಯವಾಗಿರಲಿಲ್ಲ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪತಿಯ ಮೇಲೆಯೇ ಅನುಮಾನ ಬಲವಾಗಿತ್ತು.
ಆರೋಪಿ ನಾಲ್ಕು ದಿನಗಳ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಗುಂಡಿ ತೋಡಿ, ನಾಯಿ ಸತ್ತಿದೆ ಎಂದು ನಾಟಕವಾಡಿ, ಮಹಿಳೆಯ ಶವ ಮತ್ತು ನಾಯಿಯ ಶವವನ್ನು ಒಂದೇ ಗುಂಡಿಯಲ್ಲಿ ಹಾಕಿ ಮುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವದಂತಿಗಳು ಹರಡಿದ ಬಳಿಕ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಐದು ಅಡಿ ಆಳದ ಗುಂಡಿಯಿಂದ ಶವವನ್ನು ಹೊರತೆಗೆದರು. ಶವ ಪತ್ತೆಯಾದ ನಂತರ, ಮೃತೆಯ ಕುಟುಂಬವು ಪತಿ, ಆತನ ಪ್ರೇಯಸಿ ಹಾಗೂ ಆತನ ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಿದೆ ಹಾಗೂ ಪ್ರಕರಣದ ತನಿಖೆ ಮುಂದುವರಿದಿದೆ.

