ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಭ್ಯ ರೀತಿಯಲ್ಲಿ ಎಐ ಫೋಟೋ ಹರಿಬಿಟ್ಟ ಆರೋಪಿ ವಿರುದ್ಧ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯ, ವಕೀಲ ವಿಶ್ವನಾಥ್ ಕೆ.ಪಿ. ಅವರು ಫೆ.೧೪ ರಂದು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಖಲಂದರ್ ಎಂಬ ವ್ಯಕ್ತಿ ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ದುರ್ಬಳಕೆ ಮಾಡಿ “ಭಕ್ತರೇ ಶೋಲೆ ಚಿತ್ರದಲ್ಲಿ ಬಸಂತಿಯ ಚಿಕ್ಕಮ್ಮ ಜೈ ಅವರನ್ನು ನೀವು ಏನು ಮಾಡುತ್ತೀರಿ, ಎಷ್ಟು ಸಂಪಾದಿಸುತ್ತೀರಿ ಮತ್ತು ನಿಮ್ಮ ಕುಟುಂಬ ಹೇಗಿದೆ ಎಂದು ಕೇಳುತ್ತಾರೆ. ಜೈ ಅವರ ಉತ್ತರ ಹೀಗಿತ್ತು. ಒಬ್ಬ ಮಹಾನ್ ವ್ಯಕ್ತಿಗೆ ಸಂಪೂರ್ಣವಾಗಿ ಸೂಕ್ತವಾಗಿದೆ. ಜೈ ಮೋರಿ” ಎಂದು ತಲೆ ಬರಹ ಬರೆದುಕೊಂಡು, ಮೋದಿಜೀಯವರ ಫೋಟೋವನ್ನು ಅವಮಾನಿಸುವ ರೀತಿಯಲ್ಲಿ ಅಪ್ಲೋಡ್ ಮಾಡಿ ಅದರಲ್ಲಿ “ಭಯದಿಂದಲೇ ಮೋದಿಜಿ ಅಮೆರಿಕದ ವಿರುದ್ಧ ಮಾತನಾಡುತ್ತಿಲ್ಲ! ಈ ಸತ್ಯ ಎಲ್ಲರಿಗೂ ತಿಳಿದಿದೆ” ಎಂದು ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು, ಫೆ.14: ನಕಲಿ ಪತ್ರ ಪ್ರಕರಣ: ಶಾಸಕ ಸುನೀಲ್ ಕುಮಾರ್, ಎಂಎಲ್ಸಿ ರವಿಕುಮಾರ್ ವಿರುದ್ಧ ದೂರು
ಆ ಮೂಲಕ, ಮೋದಿ ಅವರ ವಿರುದ್ಧ ಅವರ ಘನತೆ ಮತ್ತು ಹುದ್ದೆಗೆ ಧಕ್ಕೆ ತಂದು ಅಪಹಾಸ್ಯ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿ ಜನರ ನಡುವೆ ರಾಜಕೀಯ ದ್ವೇಷ ಹುಟ್ಟು ಹಾಕಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿ ದೇಶದ ದ್ರೋಹದ ಕೆಲಸದಲ್ಲಿ ತೊಡಗಿದ್ದಾನೆ ಎಂದು ದೂರಲಾಗಿದೆ.
ಅಲ್ಲದೆ, ಈತನ ಕೃತ್ಯ ಸಮಾಜದಲ್ಲಿ ರಾಜಕೀಯ ಪಕ್ಷಗಳ ಗುಂಪುಗಳ ನಡುವೆ ಘರ್ಷಣೆಯನ್ನು ಉಂಟುಮಾಡಲು ಪ್ರೇರೇಪಿಸುತ್ತಿರುವುದು ಸ್ಪಷ್ಟವಾಗಿರುತ್ತದೆ. ಆದ್ದರಿಂದ ಮೊಹಮ್ಮದ್ ಖಲಂದರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರು ನೀಡುವ ವೇಳೆ ವಿಶ್ವನಾಥ್ ಅವರೊಂದಿಗೆ ವಸಂತ ಕುಮಾರ್, ಹರ್ಷ, ರಮೇಶ್ ಸಲ್ತಾನ್ಪುರ, ಪ್ರಸನ್ನ ದೊಡ್ಡಮನೆ, ಹೇಮನಾಥ್ ಕುಮಾರ್, ಯಶವಂತ್, ಶಿವು ಅವರಿದ್ದರು. ಮಾ.11ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ವಿಶ್ವನಾಥ್ ಕೆ.ಪಿ. ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.
ಆರ್ಟಿಫಿಶಲ್ ಇಂಟಲಿಜೆನ್ಸ್ (ಎಐ) ಬಂದನಂತರ ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಫೋಟೋ, ವಿಡಿಯೋ ಕಂಟೆಂಟ್ಗಳು ಹರಿದಾಡಲು ಪ್ರಾರಂಭಿಸಿವೆ. ಆದರೆ, ಕೆಲವರು ಮತ್ತೊಬ್ಬರ ತೇಜೋವಧೆ ಮಾಡುವ ಮೂಲಕ ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡುತ್ತಿರುವುದು ಕಳವಳಕಾರಿ ಹಾಗೂ ಆಘಾತಕಾರಿಯೂ ಆಗಿದೆ. ಅದರಲ್ಲೂ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಅನೇಕರು ಫೋಟೋಗಳನ್ನು ಹಾಕುತ್ತಿರುವುದು ಹೆಚ್ಚಾಗಿದೆ. ಇತ್ತೀಚೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ಮಾಜಿ ಗೃಹಸಚಿವರೂ ಆಗಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಅವರನ್ನು ಬಂಧಿಸಲಾಗಿತ್ತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

