ಕಾರ್ಕಳ : ಇಲ್ಲಿನ ನಿಟ್ಟೆ ಗ್ರಾಮದ ಬೋರಕಲ್ಲುಗುಡ್ಡೆ ಎಂಬಲ್ಲಿ ಆಕಸ್ಮಿಕವಾಗಿ ತೆರೆದ ಬಾವಿಯೊಂದಕ್ಕೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅತ್ಯಂತ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಮಂಗಳವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಆಹಾರ ಅರಸಿ ಬಂದಿದ್ದ ಚಿರತೆಯು ನಿಟ್ಟೆ ಗ್ರಾಮದ ನಿವಾಸಿ ಕರಿ ಪೂಜಾರಿ ಎಂಬುವವರ ಮನೆಯ ಸಮೀಪವಿರುವ ಕೃಷಿ ಜಮೀನಿಗೆ ಬಂದಿತ್ತು. ಈ ವೇಳೆ ಕತ್ತಲೆಯಲ್ಲಿ ಹಾದಿ ತಿಳಿಯದೆ ಜಮೀನಿನಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ ಎಂದು ಶಂಕಿಸಲಾಗಿದೆ.

ಬೆಳಿಗ್ಗೆ ಬಾವಿಯಲ್ಲಿ ಚಿರತೆ ಇರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಬೋನು ಮತ್ತು ಬಲೆಯನ್ನು ಬಳಸಿ ಅತ್ಯಂತ ಜಾಗರೂಕತೆಯಿಂದ ಚಿರತೆಯನ್ನು ಮೇಲಕ್ಕೆತ್ತಿದರು.
ಇದನ್ನೂ ಓದಿ: ಯಾದಗಿರಿಯಲ್ಲಿ ರಕ್ತಸಿಕ್ತ ಭೂಮಿ: ಅಣ್ಣನ ಕೊಲೆಗೆ ಪ್ರತೀಕಾರ, ದಾಯಾದಿಗಳ ಮನೆಗೆ ಬೆಂಕಿ ಹಚ್ಚಿದ ತಮ್ಮ

ರಕ್ಷಿಸಲ್ಪಟ್ಟ ಚಿರತೆಗೆ ಯಾವುದೇ ಗಾಯಗಳಾಗದ ಕಾರಣ, ಅದನ್ನು ಪ್ರಾಥಮಿಕ ತಪಾಸಣೆಯ ನಂತರ ಹತ್ತಿರದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ತೆರೆದ ಬಾವಿಗಳಿಗೆ ತಡೆಗೋಡೆ ನಿರ್ಮಿಸುವಂತೆ ಅಥವಾ ಮುಚ್ಚುವಂತೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಮೇಲೆ ಜನ ಒತ್ತಡ ಹೇರುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


