ಪುತ್ತೂರು, ಫೆ.12: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ನಡೆದ ‘ಕೋಳಿ ಅಂಕ’ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹೈಕೋರ್ಟ್ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ವಿಟ್ಲದ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ ಅಮ್ಮನವರ) ದೇವಸ್ಥಾನ ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಇಲ್ಲಿ ಜಾತ್ರೋತ್ಸವದ ನಂತರ ಸಂಪ್ರದಾಯದಂತೆ ಮೂರು ದಿನಗಳ ಕಾಲ ಜೂಜಾಟವಿಲ್ಲದ, ಕೇವಲ ಧಾರ್ಮಿಕ ವಿಧಿವಿಧಾನಗಳ ಭಾಗವಾಗಿ ಕೋಳಿ ಅಂಕ ನಡೆಯುತ್ತದೆ.
ಈ ಬಾರಿ ಪೊಲೀಸರು ಈ ಕೋಳಿ ಅಂಕಕ್ಕೆ ತಡೆ ನೀಡಿ, ನಡೆಸದಂತೆ ಸೂಚಿಸಿದ್ದರು. ಆದರೆ ಧಾರ್ಮಿಕ ನಂಬಿಕೆಯನ್ನು ಗೌರವಿಸಬೇಕು ಎಂಬ ಕಾರಣಕ್ಕೆ ಶಾಸಕ ಅಶೋಕ್ ರೈ ಅವರು ಸ್ಥಳದಲ್ಲೇ ಇದ್ದು ಕೋಳಿ ಅಂಕ ನಡೆಸಲು ಬೆಂಬಲ ನೀಡಿದ್ದರು.ಪೊಲೀಸರ ಆದೇಶ ಉಲ್ಲಂಘಿಸಿ ಕೋಳಿ ಅಂಕ ನಡೆಸಿದ ಆರೋಪದ ಮೇಲೆ ಶಾಸಕ ಅಶೋಕ್ ರೈ ಸೇರಿದಂತೆ ಸುಮಾರು 20 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ಆರಂಭದಲ್ಲಿ ಶಾಸಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದ್ದ ಹೈಕೋರ್ಟ್, ಇಂದು ಈ ಇಡೀ ಪ್ರಕರಣಕ್ಕೆ ತಡೆಯಾಜ್ಞೆ (Stay Order) ನೀಡಿದೆ. ಶಾಸಕರ ಪರವಾಗಿ ಖ್ಯಾತ ನ್ಯಾಯವಾದಿಗಳಾದ ಅರುಣ್ ಶ್ಯಾಂ ಮತ್ತು ಸುಯೋಗ್ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದರು. ಇದು ಕೇವಲ ಕ್ರೀಡೆಯಲ್ಲ, ಬದಲಾಗಿ ಶತಮಾನಗಳಿಂದ ನಡೆದು ಬಂದಿರುವ ಧಾರ್ಮಿಕ ಸಂಪ್ರದಾಯ ಎಂಬ ವಾದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಮಾನ್ಯತೆ ನೀಡಿದಂತಾಗಿದೆ. ಇದರಿಂದ ಕೇಪು ಭಾಗದ ಭಕ್ತರಲ್ಲಿ ಮತ್ತು ಶಾಸಕರ ಬೆಂಬಲಿಗರಲ್ಲಿ ಸಂತಸ ಮೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

