ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಕಂಕನಾಡಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್ಗೆ ಎಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಏಪ್ರಿಲ್ 27ರ ಸೋಮವಾರದಂದು ತೀರ್ಪು ಪ್ರಕಟಿಸಲಿದೆ.
ಸುಮಾರು ಮೂರು ತಿಂಗಳ ಹಿಂದೆ, ಮೊಹಮ್ಮದ್ ಶಾರಿಕ್ ಈ ಸ್ಫೋಟದಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ‘ಮನವಿ ಚೌಕಾಸಿ’ (Plea Bargaining) ಅರ್ಜಿಯನ್ನು ಸಲ್ಲಿಸಿದ್ದನು. ಅಂದರೆ, ವಿಚಾರಣೆಯನ್ನು ಎದುರಿಸುವ ಬದಲು ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದಾಗಿ ಆತ ತಿಳಿಸಿದ್ದನು. ಈ ಅರ್ಜಿಯನ್ನು ನ್ಯಾಯಾಲಯವು ಶನಿವಾರ ಅಧಿಕೃತವಾಗಿ ಸ್ವೀಕರಿಸಿದೆ.

ಶನಿವಾರ ನಡೆದ ವಿಚಾರಣೆಯ ವೇಳೆ ಎನ್ಐಎ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಬಲವಾದ ವಾದ ಮಂಡಿಸಿದರು. “ಇದು ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ಅಪರಾಧವಾಗಿದೆ. ಸ್ಫೋಟದ ತೀವ್ರತೆ ಮತ್ತು ಸಮಾಜದ ಮೇಲಿನ ಅದರ ಪರಿಣಾಮವನ್ನು ಪರಿಗಣಿಸಿ ಅಪರಾಧಿಗೆ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಶಿಕ್ಷೆಯನ್ನೇ ನೀಡಬೇಕು” ಎಂದು ನ್ಯಾಯಾಧೀಶರನ್ನು ಒತ್ತಾಯಿಸಿದರು.
ಇದನ್ನೂ ಓದಿ: ಮಂಗಳೂರು: ತಲೆಮರೆಸಿಕೊಂಡಿದ್ದ ಶಿಕ್ಷೆಗೊಳಗಾಗಿದ್ದ ಕೊಲೆ ಅಪರಾಧಿ ಕೊನೆಗೂ ಅರೆಸ್ಟ್

2022ರ ನವೆಂಬರ್ 19ರಂದು ಸಂಜೆ ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಐಇಡಿ (IED) ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಆರೋಪಿ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಈ ಕುರಿತು ತನಿಖೆ ನಡೆಸಿದ ಎನ್ಐಎ, 2024ರಲ್ಲಿ ಶಾರಿಕ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

