ಚಿಕ್ಕಮಗಳೂರು: ಶಿಕ್ಷಕರೊಂದಿಗೆ ಈಜಲು ತೆರಳಿದ್ದ ವೇಳೆ ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟಿ ಗೋವರ್ದನ್ ನಾಯಕ್ ಅವರ ಪುತ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ವಿಟ್ಲ ನಿವಾಸಿ ಅನಿಕೇತ್ ಮೃತ ದುರ್ದೈವಿ. ಜಯಪುರದಲ್ಲಿರುವ ಗುರುಕುಲ ಮಾದರಿಯ ಸತ್ಯಸಾಯಿ ವಿದ್ಯಾಸಂಸ್ಥೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದ ವಿಟ್ಲದ ಕಾಶಿ ಮಠದ ನಿವಾಸಿ ಅನಿಕೇತ್ ಸೇರಿದಂತೆ ಒಟ್ಟು 15 ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ದಿದ್ದಾರೆ. ಮದ್ಯಾಹ್ನ 2-3 ಗಂಟೆ ಸುಮಾರಿಗೆ ಅನಿಕೇತ್ ಸಿಮ್ಮಿಂಗ್ ಪೂಲ್’ಗೆ ಹಾರಿದ್ದು, ಈ ವೇಳೆ ನೀರಿನಲ್ಲಿ ಮುಳುಗಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸದ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ವಿಮ್ಮಿಂಗ್ ಪೂಲ್ ಗೆ ಹಾರುವಾಗ ಅನಿಕೇತ್ ಭೀತಿಗೊಂಡಿದ್ದು, ಈ ಭಯದಲ್ಲಿ ನೀರಿನಲ್ಲಿ ಉಸಿರು ತೆಗೆಯಲು ಸಾಧ್ಯವಾಗದೆ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


