ಪುತ್ತೂರು: ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಾವು ಸಮೀಪದ ಗ್ರಾಮದ ಕುಡ್ಪುನಡ್ಕದ ನರ್ಸಿಗಣದಲ್ಲಿ ಆ.4ರಂದು ಬೆಳಗ್ಗೆ ಸಂಭವಿಸಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ವಿದ್ಯುತ್ ಕಂಬ ನೆಲಭಾಗದಿಂದಲೇ ಮುರಿದು ಎರಡು ಮೀಟರ್ ದೂರಕ್ಕೆ ಎತ್ತೊಯ್ಯಲ್ಪಟ್ಟಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ.
ಇದನ್ನೂ ಓದಿ: ಪುತ್ತೂರು: ಅಪಘಾತದಲ್ಲಿ ಗಾಯಗೊಂಡ ವಿಶಾಲ್ಗೆ ಅರುಣ ಸಾರಥಿ ಸಂಘಟನೆಯಿಂದ ಧನಸಹಾಯ
ಅಪಘಾತದ ತೀವ್ರತೆಗೆ ವಿದ್ಯುತ್ ತಂತಿಗಳು ಕಡಿತವಾಗದಿದ್ದರೂ ತುಂಡಾದ ಕಂಬದ ಸೆಳೆತಕ್ಕೆ ಮತ್ತೊಂದು ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಂತಿಗಳು ಕಡಿತವಾಗದೆ, ಮುರಿತಕ್ಕೊಳಗಾದ ಕಂಬ ಕಾರಿನ ಮೇಲೆಯೂ ಬೀಳದೆ, ಧರಾಶಾಹಿಯೂ ಆಗದೆ ನೇರವಾಗಿ ಕಾರಿಗೆ ತಾಕಿಕೊಂಡು ನಿಂತಿದ್ದ ಪರಿಣಾಮ ಯಾವುದೇ ವಿದ್ಯುತ್ ಅವಘಡ ಸಂಭವಿಸಿಲ್ಲ. ಜೀವಹಾನಿಯೂ ಸಂಭವಿಸಿಲ್ಲ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎನ್ನುವ ಮಾಹಿತಿ ತಿಳಿದುಬಂದಿಲ್ಲ.
ಸದ್ಯ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿ, ಕಾರು ತೆರವುಗೊಳಿಸಿ ವಿದ್ಯುತ್ ಕಂಬ ಅಳವಡಿಸುವ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯರೂ ಕೈ ಜೋಡಿಸಿದ್ದಾರೆ.

