ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಇಂದು (ಏಪ್ರಿಲ್ 10, ಶುಕ್ರವಾರ) ಬೆಳಿಗ್ಗೆ ಅತ್ಯಂತ ಭಕ್ತಿ-ಭಾವಗಳಿಂದ ಚಾಲನೆ ನೀಡಲಾಯಿತು. ವರ್ಷಂಪ್ರತಿಯ ಸಂಪ್ರದಾಯದಂತೆ ಬೆಳಿಗ್ಗೆ ದೇವರ ಉತ್ಸವ ಬಲಿಯೊಂದಿಗೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು.
ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ಉತ್ಸವ ಬಲಿ ನಡೆದ ನಂತರ ದೇವಸ್ಥಾನದ ಧ್ವಜಸ್ತಂಭಕ್ಕೆ ಧ್ವಜಾರೋಹಣ ಮಾಡುವ ಮೂಲಕ ಹತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ನಾಂದಿ ಹಾಡಲಾಯಿತು.

ಇದನ್ನೂ ಓದಿ: ತಂತ್ರಜ್ಞಾನ ಬಳಕೆಯ ನಡುವೆ ಚಿಂತನಾ ಶಕ್ತಿ ಕಾಪಾಡಿಕೊಳ್ಳಿ: ಅತುಲ್ ಭಟ್
ಇಂದಿನಿಂದ ಹತ್ತು ದಿನಗಳ ಕಾಲ ಪುತ್ತೂರು ಪೇಟೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಟ್ಟೆ ಪೂಜೆ ಹಾಗೂ ಪ್ರಸಿದ್ಧ ಪುತ್ತೂರು ಬೆಡಿ (ಸಿಡಿಮದ್ದು ಪ್ರದರ್ಶನ) ಭಕ್ತರನ್ನು ಸೆಳೆಯಲಿದೆ. ಏಪ್ರಿಲ್ 17ರಂದು ಅದ್ಧೂರಿ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


