ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಕಲ್ಲುಗುಂಡಿ ಗ್ರಾಮದಲ್ಲಿ ನಡೆದ ಈ ಕೃತ್ಯ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿದೆ. ಹೌದು, ಮಾವನೇ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ನಡೆದಿದ್ದು, ತಂದೆಯ ಇಂತಹ ಕೃತ್ಯಕ್ಕೆ ಪುತ್ರನೂ ಸಾಥ್ ನೀಡಿರುವುದು ಆಘಾತಕಾರಿಯಾಗಿದೆ.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೊಳ್ಳೆಮಾರು ನಿವಾಸಿ ಸಾಹಿತ್ಯ ರೈ ಅವರನ್ನು ಸುಳ್ಯ ಸಮೀಪದ ಸಂಪಾಜೆಯ ಕಲ್ಲುಗುಂಡಿ ನಿವಾಸಿಯಾಗಿರುವ ನಿತ್ಯಾನಂದ ರೈ ಅವರಿಗೆ 2021 ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಇವರ ದಾಂಪತ್ಯ ಜೀವನದ ಸಾಕ್ಷಿಯಾಗಿ ಮೂರೂವರೆ ವರ್ಷದ ಗಂಡು ಮಗು ಕೂಡ ಇದೆ.

ಕಲ್ಲುಗುಂಡಿಯಲ್ಲಿ ಯಶಸ್ವಿಯವರು ತನ್ನ ಪತ್ನಿ ಸಾಹಿತ್ಯ, ಮಗ ಹಾಗೂ ತಂದೆ ನಿತ್ಯಾನಂದ ಅವರು ವಾಸಿಸುತ್ತಿದ್ದಾರೆ. ಯಶಸ್ವಿ-ಸಾಹಿತ್ಯ ನಡುವೆ ಆರಂಭದಲ್ಲಿ ಉತ್ತಮ ಬಾಂಧವ್ಯ ಇದ್ದರೂ ಮೂರು ವರ್ಷಗಳ ನಂತರ ಮಾವ ನಿತ್ಯಾನಂದರ ವಕ್ರ ದೃಷ್ಠಿ ಸಾಹಿತ್ಯರವರ ಮೇಲೆ ಬಿದ್ದಿತ್ತು. ಹಲವು ಬಾರಿ ಸಾಹಿತ್ಯರವರ ಮೇಲೆ ಮಾವ ಕೈ ಮಾಡಲು ಮುಂದಾಗಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಅರ್ಚಕನಿಂದ ಮಹಿಳೆ ಮೇಲೆ ಅತ್ಯಾಚಾರ

ಮಾವನ ಕೃತ್ಯವನ್ನು ಸಾಹಿತ್ಯ ವಿರೋಧಿಸಿದಾಗ ನಿತ್ಯಾನಂದ ಅವರು “ನೀನು ಆಕೆಗೆ ಡಿವೋರ್ಸ್ ನೀಡು” ಎಂದು ಮಗನನ್ನು ಒತ್ತಾಯಿಸುತ್ತಿದ್ದರು. ಅಷ್ಟಕ್ಕೂ ಸುಮ್ಮನಾಗದ ನಿತ್ಯಾನಂದ ಅವರು, “ನೀನು ಆಕೆಯನ್ನು ಕೊಂದುಹಾಕು, ಹೆದರಬೇಡ, ನಾನು ಬೇಕಾದರೆ ಜೈಲಿನಲ್ಲಿ ಕುಳಿತುಕೊಳ್ಳುತ್ತೇನೆ” ಎಂದು ಮಗನಲ್ಲಿ ಹೇಳಿ ಕೊಲೆಗೆ ಪ್ರಚೋದನೆಯನ್ನೂ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಮಾವನ ಕೃತ್ಯವನ್ನು ಸಾಹಿತ್ಯ ಹೇಳಿಕೊಂಡಾಗ ಪೋಷಕರು ಆಕೆಯನ್ನು ಸಮಾಧಾನಪಡಿಸುತ್ತಿದ್ದರು. ಪತಿಯಲ್ಲಿ ಹೇಳಿಕೊಂಡರೆ, ತಂದೆಯ ಮಾತನ್ನು ಪಾಲಿಸಬೇಕು ಎಂದು ಪತ್ನಿಗೇ ಬೈಯ್ದು ಬಾಯಿಮುಚ್ಚಿಸುತ್ತಿದ್ದರಂತೆ.
ಆದರೆ, ಫೆಬ್ರವರಿ 3ರ ರಾತ್ರಿ, ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆರೋಪಿತ ಮಾವ ಸಾಹಿತ್ಯಾರ ಬೆಡ್ ರೂಮ್ಗೆ ನುಗ್ಗಿ, ಹಿಂದಿನಿಂದ ತಬ್ಬಿಕೊಂಡು ಮಂಚದ ಮೇಲೆ ದೂಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿರೋಧಿಸಿದಾಗ ಆಕೆಯ ಕುತ್ತಿಗೆ ಹಿಡಿದು, ಮುಖದ ಮೇಲೆ ಪರಚಿ, ಮೂಗು ಕಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಒಂಟಿ ಮಹಿಳೆಯ ಮನೆಯಲ್ಲಿದ್ದ ಅನ್ಯಮತೀಯ ಪೊಲೀಸರ ವಶಕ್ಕೆ
ಅಜ್ಜನ ಕೃತ್ಯವನ್ನು ಕಣ್ಣಾರೆ ಕಂಡ ಮೂರೂವರೆ ವರ್ಷದ ಮಗು ಜೋರಾಗಿ ಅಳುತ್ತಿದ್ದಂತೆ ನಿತ್ಯಾನಂದರವರು ಗಡಿಬಿಡಿಗೊಂಡಿದ್ದಾರೆ. ಈ ವೇಳೆ ಸಾಹಿತ್ಯ ಮಗುವಿನೊಂದಿಗೆ ಮನೆಯಿಂದ ಹೊರಬಂದು ಪತಿಗೆ ವಿಷಯ ತಿಳಿಸಿದ್ದಾರೆ. ಆದರೆ ಪತಿ, ತಂದೆಯ ಪರವಾಗಿ ಮಾತನಾಡಿ ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾರೆ. ಅನ್ಯ ದಾರಿ ಇಲ್ಲದೆ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ದೌಡಾಯಿಸಿದ ಪೋಷಕರು ರಕ್ತಸಿಕ್ತ ಸ್ಥಿತಿಯಲ್ಲಿ ಇದ್ದ ಮಗಳನ್ನು ಕೂಡಲೇ ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಬಂಟ್ವಾಳದ ಮಂಚಿಗೆ ಹೋಗುವ ದಾರಿ ಮದ್ಯೆ ಮನೆ ಸಮೀಪ ತಲುಪುತ್ತಲೇ ಉಸಿರಾಟಕ್ಕೆ ತೊಂದರೆ ಕಂಡುಬಂದ ಹಿನ್ನೆಲೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಸಂತ್ರಸ್ತೆ ಸಾಹಿತ್ಯ ರೈ ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ZERO FIR ಸಂಖ್ಯೆ 01/2026 ದಾಖಲಿಸಲಾಗಿದ್ದು, BNS ಕಲಂ 85, 74, 115(2), 117(2), 351(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಬಂಟ್ವಾಳ ಪೊಲೀಸರು ಸುಳ್ಯ ಠಾಣೆಗೆ ವರ್ಗಾಯಿಸಿದ್ದು, ತನಿಖೆ ಮುಂದುವರಿದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

