ಶಿವಮೊಗ್ಗ: ಜಿಲ್ಲೆಯ ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಆವರಣದೊಳಗೆ ಸೋಮವಾರ ಬೆಳಿಗ್ಗೆ ಕರಡಿಯೊಂದು ನುಗ್ಗಿ ಭಾರಿ ಆತಂಕ ಮೂಡಿಸಿತ್ತು. ಕಳೆದ ಕೆಲವು ದಿನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕರಡಿ, ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.
ವಿಮಾನ ನಿಲ್ದಾಣದ ಸಮೀಪವಿರುವ ವಿನಾಯಕ ನಗರ ಮತ್ತು ಜ್ಯೋತಿ ನಗರದಲ್ಲಿ ಬೆಳಿಗ್ಗೆ ಕರಡಿ ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ತೋಟ ಮತ್ತು ಮನೆಗಳ ಪಕ್ಕದಲ್ಲಿ ಕರಡಿ ಸಂಚರಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಜನಸಂದಣಿ ಹೆಚ್ಚಾದ ಕಾರಣ ಕರಡಿ ಗಾಬರಿಗೊಂಡು ವಿಮಾನ ನಿಲ್ದಾಣದ ಕಾಂಪೌಂಡ್ ಹಾರಿ ಒಳಗಡೆ ನುಗ್ಗಿತ್ತು.

ಇದನ್ನೂ ಓದಿ: ಪ್ಯಾಂಟ್ ಸಡಿಲಿಸಿ ತನ್ನ ಗುಪ್ತಾಂಗವನ್ನು ಮಹಿಳೆಯ ಕಿವಿಗೆ ತಾಗಿಸಿದ ವ್ಯಕ್ತಿ
ಮಾಹಿತಿ ತಿಳಿಯುತ್ತಿದ್ದಂತೆ ಉಂಬ್ಳೆಬೈಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ವಿಮಾನ ನಿಲ್ದಾಣದ ಪೊದೆಯೊಳಗೆ ಅಡಗಿದ್ದ ಕರಡಿಯನ್ನು ಪತ್ತೆಹಚ್ಚುವುದು ಸವಾಲಾಗಿತ್ತು. ಕರಡಿಯ ಕತ್ತಿನಲ್ಲಿ ರೇಡಿಯೋ ಕಾಲರ್ ಕೂಡ ಇರುವುದು ಕಂಡುಬಂದಿದೆ. ವನ್ಯಜೀವಿ ವಿಭಾಗದ ಪಶುವೈದ್ಯ ಡಾ. ಮುರಳಿ ಮನೋಹರ್ ನೇತೃತ್ವದ ತಂಡ ಕರಡಿಗೆ ಎರಡು ಬಾರಿ ಅರಿವಳಿಕೆ ಮದ್ದು (Tranquilizer) ನೀಡುವಲ್ಲಿ ಯಶಸ್ವಿಯಾಯಿತು.

ಅರಿವಳಿಕೆ ಮದ್ದು ನೀಡಿದ ನಂತರ ಕರಡಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಬಳಿಕ ಅದನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


