ಕಲ್ಲಡ್ಕ: “ಸಂಸ್ಕೃತ ಮತ್ತು ಸಂಸ್ಕೃತಿ ಇವೆರಡೂ ನಮ್ಮ ದೇಶದ ಗಟ್ಟಿ ಬುನಾದಿ” ಎಂದು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ವೆಂಕಟರಮಣ ಭಟ್ ಮಂಜುಳಗಿರಿ ಅಭಿಪ್ರಾಯಪಟ್ಟರು. ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂಸ್ಕೃತ ಸಪ್ತಾಹ ಮತ್ತು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆಯ ಪ್ರಾಚೀನತೆ ಹಾಗೂ ವೈಶಿಷ್ಟ್ಯವನ್ನು ವಿವರಿಸಿದ ವೆಂಕಟರಮಣ ಭಟ್ ಅವರು, ಭಾಷೆ ಮತ್ತು ಸಂಸ್ಕೃತಿ ಪ್ರತಿಯೊಬ್ಬ ಭಾರತೀಯನ ಗುರುತಾಗಿದೆ ಎಂದು ತಿಳಿಸಿದರು. ರಕ್ಷಾಬಂಧನದ ಪವಿತ್ರ ಸಂದರ್ಭವನ್ನು ಉಲ್ಲೇಖಿಸಿ, “ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಸಹೋದರ-ಸಹೋದರಿ ಭಾವನೆ ಸದಾ ಜಾಗೃತವಾಗಿರಬೇಕು. ಪ್ರತಿಯೊಬ್ಬ ಪ್ರಜೆಯೂ ದೇಶದ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಸದಾ ಸಿದ್ಧರಾಗಿರಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಮನೆಯಲ್ಲಿ ನೀಡಲಾಗುವ ಸಂಸ್ಕಾರವೇ ಸಂಸ್ಕೃತಿಯಾಗಿ ಸಮಾಜಕ್ಕೆ ಕೊಡುಗೆಯಾಗುತ್ತದೆ: ಡಾ. ಗೀತಾ ಕುಮಾರಿ ಟಿ.
ಕಾರ್ಯಕ್ರಮದ ಯಶಸ್ಸಿಗೆ ಹಲವು ಸಂಸ್ಥೆಯ ಪ್ರಮುಖರು ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿ ಸತೀಶ್ ಶಿವಗಿರಿ, ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ, ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ವಂಸತ್ ಬಲ್ಲಾಳ್, ಮಾತೃ ಭಾರತಿ ಅಧ್ಯಕ್ಷೆ ರೇಖಾ ಶರ್ಮಾ, ಮಾತೃ ಭಾರತಿ ಕಾರ್ಯದರ್ಶಿ ಶ್ವೇತಾ ಕಾಮತ್, ಮಾತೃ ಭಾರತಿ ಪ್ರಮುಖರು ಹರಿಣಾಕ್ಷಿ ಮುಲಾರು ಭಾಗವಹಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ನಿನಾದ್ ಸ್ವಾಗತ ಕೋರಿದರೆ, ಧನ್ಯಶ್ರೀ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕೃತಿಕಾ ನಿರ್ವಹಿಸಿದರು. ಸಂಸ್ಥೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಭಕ್ತಿಯಿಂದ ಭಾಗವಹಿಸಿ ರಕ್ಷಾಬಂಧನದ ಶುಭಾಶಯ ವಿನಿಮಯ ಮಾಡಿಕೊಂಡರು.

