ಚಿಕ್ಕಮಗಳೂರು: ಆಗಸ್ಟ್ 25ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ನಿಲ್ಲಿಸಿ, ಅದಕ್ಕೆ ಪಾಕಿಸ್ತಾನ ಹಾಗೂ ಮುಜಾಹಿದ್ಗಳಿಗೆ ಸಂಬಂಧಿಸಿದ ಪ್ರಚೋದನಾತ್ಮಕ ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಘಟನೆಯ ಕುರಿತು ಬಿಜೆಪಿ ನಾಯಕ ಸಿ.ಟಿ. ರವಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಗೃಹ ಸಚಿವರ ತುಷ್ಟೀಕರಣ ರಾಜಕಾರಣವನ್ನು ಖಂಡಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ?
ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಸಂಬಂಧಿತ ಹಾಡನ್ನು ಬಳಸಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಎಸೆದ ಬಹಿರಂಗ ಸವಾಲು.
ಮುಜಾಹಿದ್ ಬೆಂಬಲಿತ ಹಾಡನ್ನು ಬಳಸಿ, ಆ… pic.twitter.com/hg5xI98kmg
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) August 24, 2026
‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಖಾತೆಯಿಂದ 40 ಅಡಿ ಎತ್ತರದ ಟಿಪ್ಪು ಕಟೌಟ್ ವಿಡಿಯೋಗೆ ಪಾಕಿಸ್ತಾನಿ ಸೈನಿಕರು ಹಾಗೂ ಮುಜಾಹಿದ್ಗಳನ್ನು ಹೊಗಳುವ ಸಾಹಿತ್ಯವಿದ್ದ ಹಾಡನ್ನು ಬಳಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತಂದ ಆರೋಪದಡಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 7 ಜನ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ 21 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಗಡೀಪಾರು
“ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ? 40 ಅಡಿ ಎತ್ತರದ ಟಿಪ್ಪು ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಬೆಂಬಲಿತ ಹಾಡು ಬಳಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಮುಕ್ತ ಸವಾಲಾಗಿದೆ. ಗೃಹ ಸಚಿವರು ಆರ್ಎಸ್ಎಸ್ ವಿಮರ್ಶಿಸುವುದನ್ನು ಬಿಟ್ಟು ತುಷ್ಟೀಕರಣ ರಾಜಕಾರಣ ಬದಿಗೊತ್ತಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಿಟಿ ರವಿ ಆಗ್ರಹಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ದೇಶವಿರೋಧಿ ಕೃತ್ಯ ಎಸಗುವವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವ ಧೈರ್ಯ ತೋರಿಸಬೇಕು” ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

