ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಸಂಚಲನ ಮೂಡಿದ್ದು, ಪೀಠದ ಜಗದ್ಗುರುಗಳಾಗಿದ್ದ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪೀಠದ ಇತಿಹಾಸದಲ್ಲೇ ಇದು ದೊಡ್ಡ ತಿರುವು ನೀಡಿದೆ.
ಸಮುದಾಯದ ಮುಖಂಡರ ಪ್ರಕಾರ, ವಚನಾನಂದ ಶ್ರೀಗಳು ಪೀಠದ ಘನತೆಗೆ ಧಕ್ಕೆ ತರುವಂತೆ ವರ್ತಿಸುತ್ತಿದ್ದಾರೆ ಮತ್ತು ಸಮುದಾಯದ ಹಿತಾಸಕ್ತಿಗಿಂತ ವೈಯಕ್ತಿಕ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿಯೂ ಸಮುದಾಯದ ಒಗ್ಗಟ್ಟಿಗೆ ಧಕ್ಕೆ ತರುವಂತಹ ನಿಲುವು ತಳೆದಿದ್ದರು ಎಂಬ ಅಸಮಾಧಾನ ಸಮುದಾಯದ ಒಂದು ವರ್ಗದಲ್ಲಿ ತೀವ್ರವಾಗಿತ್ತು.

ಇದನ್ನೂ ಓದಿ: ಉಡುಪಿ: ವೃದ್ಧನ ಪ್ರಾಣ ಉಳಿಸಿದ ‘ಒಟಿಪಿ’; ಗ್ಯಾಸ್ ಡೆಲಿವರಿ ಬಾಯ್ ಸಮಯಪ್ರಜ್ಞೆಗೆ ಶಹಬ್ಬಾಸ್!
ಹರಿಹರ ಪೀಠದ ಟ್ರಸ್ಟಿಗಳು ಮತ್ತು ಸಮುದಾಯದ ಹಿರಿಯ ನಾಯಕರು ಸಭೆ ಸೇರಿ, ಶ್ರೀಗಳನ್ನು ಪೀಠದಿಂದ ಕೆಳಗಿಳಿಸಲು ಸರ್ವಾನುಮತದ ತೀರ್ಮಾನ ಕೈಗೊಂಡಿದ್ದಾರೆ. ಶ್ರೀಗಳು ಕೂಡಲೇ ಪೀಠತ್ಯಾಗ ಮಾಡಬೇಕು ಮತ್ತು ಗುರುಪೀಠದ ಆಸ್ತಿಪಾಸ್ತಿಗಳನ್ನು ಸಮುದಾಯದ ಸುಪರ್ದಿಗೆ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಬೆಳವಣಿಗೆಯು ಪಂಚಮಸಾಲಿ ಸಮುದಾಯದ ಆಂತರಿಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


