ಕೊಯಮತ್ತೂರು: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮರು-ಪರೀಕ್ಷೆಯ ಗೊಂದಲಗಳ ನಡುವೆಯೇ ತಮಿಳುನಾಡಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ತೀವ್ರ ಮಾನಸಿಕ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ವಿರುದ್ಧ ಮತ್ತೊಮ್ಮೆ ಭಾರಿ ಜನಾಕ್ರೋಶ ಭುಗಿಲೇಳುವಂತೆ ಮಾಡಿದೆ.
ಪದೇ ಪದೇ ಪರೀಕ್ಷೆ ಬರೆಯುವ ಹತಾಶೆ:
ಮೃತ ವಿದ್ಯಾರ್ಥಿನಿಯನ್ನು ಅನುಕೀರ್ತನಾ (19) ಎಂದು ಗುರುತಿಸಲಾಗಿದೆ. ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದ ಈಕೆ, ವೈದ್ಯಕೀಯ ಸೀಟು ಪಡೆಯುವ ಹಠದೊಂದಿಗೆ ಈ ವರ್ಷ ಮೂರನೇ ಬಾರಿಗೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಇತ್ತೀಚೆಗೆ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ಅದರ ಬೆನ್ನಲ್ಲೇ ಪೀಡಿತ ಅಭ್ಯರ್ಥಿಗಳಿಗೆ ಮರು-ಪರೀಕ್ಷೆ (Re-test) ನಡೆಸುವ ಸರ್ಕಾರದ ಆದೇಶದಿಂದ ಆಕೆ ತೀವ್ರ ಮಾನಸಿಕ ಕಂಗಾಲಾಗಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.
“ಮತ್ತೊಂದು ಪರೀಕ್ಷೆಯನ್ನು ಎದುರಿಸಬೇಕಾದ ಹತಾಶೆ ಮತ್ತು ಒತ್ತಡವೇ ಆಕೆಯನ್ನು ಈ ದಿಕ್ಸೂಚಿಯಿಲ್ಲದ ಹಾದಿಗೆ ತಳ್ಳಿರುವಂತೆ ತೋರುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಡಿಎಂಕೆ ಸರ್ಕಾರದಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ:
ಈ ಕರುಣಾಜನಕ ಘಟನೆ ತಿಳಿಯುತ್ತಿದ್ದಂತೆ ಕೊಯಮತ್ತೂರಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ (Scrap NEET) ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಆಡಳಿತಾರೂಢ ಡಿಎಂಕೆ (DMK) ಪಕ್ಷವು ತಮಿಳುನಾಡಿಗೆ ‘ನೀಟ್’ನಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: 6ನೇ ಮಹಡಿಯಿಂದ 6 ತಿಂಗಳ ಮಗುವಿನೊಂದಿಗೆ ಜಿಗಿದ ತಾಯಿ ಸಾವು; ರಕ್ಷಣಾ ಬೇಲಿಗೆ ಬಿದ್ದು ಪವಾಡಸದೃಶವಾಗಿ ಬದುಕಿದ ಕಂದಮ್ಮ
ನೀಟ್ ಪರೀಕ್ಷೆಯನ್ನು ತಮಿಳುನಾಡು ವಿರೋಧಿಸುವುದೇಕೆ?:
ತಮಿಳುನಾಡು ಸರ್ಕಾರವು ಮೊದಲಿನಿಂದಲೂ ನೀಟ್ ಪರೀಕ್ಷೆಯನ್ನು ಕಠಿಣವಾಗಿ ವಿರೋಧಿಸುತ್ತಾ ಬಂದಿದೆ. ಇದರ ಹಿಂದೆ ಪ್ರಮುಖ ಕಾರಣಗಳಿವೆ:
ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ: ದುಬಾರಿ ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಹಣ ಪಾವತಿಸಲು ಸಾಧ್ಯವಿರುವ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಮಾತ್ರ ನೀಟ್ ಅನುಕೂಲ ಮಾಡಿಕೊಡುತ್ತದೆ. ಇದರಿಂದ ಬಡ ಮತ್ತು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗುತ್ತಿಲ್ಲ ಎಂಬುದು ರಾಜ್ಯ ಸರ್ಕಾರದ ವಾದ.
ಹಳೆಯ ಪದ್ಧತಿಯೇ ಬೆಸ್ಟ್: ನೀಟ್ ಜಾರಿಗೆ ಬರುವ ಮುನ್ನ ದಶಕಗಳ ಕಾಲ ತಮಿಳುನಾಡಿನಲ್ಲಿ ಕೇವಲ 12ನೇ ತರಗತಿಯ (ಪಿಯುಸಿ) ಅಂಕಗಳ ಆಧಾರದ ಮೇಲೆ ವೈದ್ಯಕೀಯ ಸೀಟುಗಳನ್ನು ನೀಡಲಾಗುತ್ತಿತ್ತು. ಇದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವರಪ್ರದಾನವಾಗಿತ್ತು.
ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿನಾಯಿತಿ ಕೋರಿ ಮಸೂದೆಯನ್ನು ಅಂಗೀಕರಿಸಲಾಗಿದ್ದರೂ, ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಗದೇ ಇರುವುದರಿಂದ ಪರೀಕ್ಷೆ ಅನಿವಾರ್ಯವಾಗಿದೆ. ಕಾರ್ಯಕರ್ತರ ಪ್ರಕಾರ, ನೀಟ್ ಪರೀಕ್ಷೆ ಜಾರಿಯಾದಾಗಿನಿಂದ ಇಂದಿನವರೆಗೆ ತಮಿಳುನಾಡೊಂದರಲ್ಲೇ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


