ಜಮ್ಮು-ಕಾಶ್ಮೀರದಲ್ಲಿ ವಿವಾದಾತ್ಮಕ ಪುಸ್ತಕ ಪ್ರಕರಣ: 8 ಶಿಕ್ಷಣ ಇಲಾಖೆ ಅಧಿಕಾರಿಗಳ ಅಮಾನತು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಪೂರೈಕೆಯಾಗಿದ್ದ ಕೆಲವು ಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರನ್ನು ವೈಭವೀಕರಿಸುವ ಅಂಶಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದೆ.

ಈ ವಿವಾದಾತ್ಮಕ ಪುಸ್ತಕಗಳನ್ನು ಈಗಾಗಲೇ ಕೇಂದ್ರಾಡಳಿತ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಿಂದ ಹಿಂಪಡೆಯಲು ಸರ್ಕಾರ ಆದೇಶಿಸಿತ್ತು.

Advertisement

ವಿವಾದಕ್ಕೆ ಕಾರಣವಾದ ಪುಸ್ತಕಗಳಲ್ಲಿ “ಪರ್ಸನಾಲಿಟಿ ಆ್ಯಂಡ್ ಲೆಜೆಂಡ್ಸ್ ಆಫ್ ಜೆ & ಕೆ” (ಲೇಖಕರು: ಹಿಲಾಲ್ ಅಹ್ಮದ್ ಮತ್ತು ಸಂತೋಷ್ ಮೀನಾ, ಪ್ರಕಾಶಕರು: ಒಬೆರಾಯ್ ಬುಕ್ ಸರ್ವಿಸಸ್, ಜಮ್ಮು) ಹಾಗೂ “ಪರ್ಸನಾಲಿಟಿ ಆಫ್ ಜಮ್ಮಿ ಆ್ಯಂಡ್ ಕಾಶ್ಮೀರ್” (ಲೇಖಕರು: ಡಾ. ಸುಶಾಂತ್ ಗಿರಿ, ಪ್ರಕಾಶಕರು: ಅನುರಾಗ್ ಪ್ರಕಾಶನ್, ದೆಹಲಿ) ಸೇರಿವೆ.

ಸರ್ಕಾರದ ಆದೇಶದ ಪ್ರಕಾರ, ಮೊದಲ ಪುಸ್ತಕದ 123 ಪ್ರತಿಗಳನ್ನು ಜಮ್ಮು, ರಾಂಬನ್ ಮತ್ತು ಉದಂಪುರ್ ಜಿಲ್ಲೆಗಳ ಶಾಲೆಗಳಿಗೆ, ಎರಡನೇ ಪುಸ್ತಕದ 128 ಪ್ರತಿಗಳನ್ನು ಜಮ್ಮು ಮತ್ತು ಬರಾಮುಲ್ಲಾ ಜಿಲ್ಲೆಗಳ ಶಾಲೆಗಳಿಗೆ ವಿತರಿಸಲಾಗಿತ್ತು.

ಈ ಪುಸ್ತಕಗಳಲ್ಲಿ ಪ್ರತ್ಯೇಕತಾವಾದಕ್ಕೆ ಸಂಬಂಧಿಸಿದ “ಅತ್ಯಂತ ಅನುಚಿತ ವಿಷಯ” ಇರುವುದರಿಂದ, ಪ್ರಕಟಣೆಗಳನ್ನು ಅನುಮೋದಿಸಿದ ಉಪಸಮಿತಿ ಸದಸ್ಯರು ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ಕಂಡುಬಂದಿದೆ ಎಂದು ಸರ್ಕಾರ ಹೇಳಿದೆ. ಇಂತಹ ವಿಷಯಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪಿಎಂ ಮೋದಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೊಲೆ ಬೆದರಿಕೆ! ಫೇಸ್‌ಬುಕ್‌ನಲ್ಲಿ ಅಬು ಮುಸ್ತಫಾ ಹಾಕಿದ ಕಾಮೆಂಟ್ ಏನು?

ಜಮ್ಮು-ಕಾಶ್ಮೀರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1956ರ ನಿಯಮ 31(1)(a) ಅಡಿಯಲ್ಲಿ ಎಂಟು ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಅಧಿಕಾರಿಗಳು:

ಫಾಜಿಲ್ ಇಮ್ರಾನ್ ಸಿದ್ದೀಕಿ, ಗುರ್ಜೀತ್ ಸಿಂಗ್, ಸಂಜೀವ್ ಶರ್ಮಾ, ಶಾಜಿಯಾ ಕೌಸರ್, ಇಮ್ತಿಯಾಜ್ ಅಹ್ಮದ್ ಮಿರ್, ನಿರಂಜನ್ ಶರ್ಮಾ, ರೇಣು ಮೆಂಗಿ, ರಾಜಮೋಹಿನಿ.

ಇದಲ್ಲದೆ, ಸಮಗ್ರ ಶಿಕ್ಷಣ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಆಧಾರಿತ ಕಂಪ್ಯೂಟರ್ ಸಹಾಯಕ ಶೇಖ್ ಸುಹೈಲ್ ಅಹ್ಮದ್ ಅವರ ಸೇವೆಯನ್ನೂ ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಿದ್ಯುತ್ ಅಭಿವೃದ್ಧಿ ಇಲಾಖೆ) ಅಶ್ವಿನಿ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ಹಾಗೂ ಸಾಮಾನ್ಯ ಆಡಳಿತ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರೋಹಿತ್ ಶರ್ಮಾ ಅವರನ್ನು ಪ್ರೆಸೆಂಟಿಂಗ್ ಅಧಿಕಾರಿಯಾಗಿ ನೇಮಿಸಲಾಗಿದೆ. ತನಿಖಾ ವರದಿಯನ್ನು 30 ದಿನಗಳೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಇದರ ಜೊತೆಗೆ, ಈ ಎರಡು ಪುಸ್ತಕಗಳ ಲೇಖಕರು ಹಾಗೂ ಪ್ರಕಾಶಕರನ್ನು ಜಮ್ಮು-ಕಾಶ್ಮೀರದಲ್ಲಿ ನಿಷೇಧಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಅವರಿಂದ ರಚಿಸಲಾದ ಅಥವಾ ಪ್ರಕಟಿಸಲಾದ ಎಲ್ಲಾ ಮುದ್ರಿತ ಪ್ರಕಟಣೆಗಳನ್ನು ತಕ್ಷಣದಿಂದಲೇ ಹಿಂಪಡೆಯಲು ಸರ್ಕಾರ ಆದೇಶಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *