ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ನಿರಾಕರಿಸುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ತ್ರಿವರ್ಣ ಧ್ವಜಕ್ಕೆ ಬಹುದೊಡ್ಡ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಖೇದ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ಕರ್ತವ್ಯದಿಂದ ತಮಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ಬರೆದಿರುವ ಸಚಿವರ ನಡೆಯನ್ನು ಸಂಸದರು ತೀವ್ರವಾಗಿ ಖಂಡಿಸಿದ್ದಾರೆ.ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸದೆ ಕನ್ನಡಿಗರಿಗೆ ಅಗೌರವ ತೋರಿದ್ದ ಸಚಿವ ಜಮೀರ್, ಇದೀಗ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಿರಾಕರಿಸುವ ಮೂಲಕ ದೇಶದ ಸಂವಿಧಾನ ಮತ್ತು ಭಾರತ ಮಾತೆಗೆ ಸಾಲು-ಸಾಲು ಅವಮಾನ ಮಾಡುತ್ತಿದ್ದಾರೆ ಎಂದು ಚೌಟ ಆಕ್ರೋಶ ವ್ಯಕ್ತಪಡಿಸಿದರು.
ಸಮಯದ ಅಭಾವ ಎಂಬ ಕುಂಟು ನೆಪವೊಡ್ಡಿ ರಾಷ್ಟ್ರೀಯ ಕರ್ತವ್ಯಕ್ಕೆ ಅಸಡ್ಡೆ ತೋರಿರುವುದು ದೇಶದ ಸಾರ್ವಭೌಮತ್ವಕ್ಕೆ ಎಸಗಿದ ನೇರ ಅಪಚಾರ. ಸಚಿವರ ಈ ಬೇಜವಾಬ್ದಾರಿ ನಡವಳಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಮುಖ್ಯಮಂತ್ರಿಗಳು, ತಕ್ಷಣವೇ ವಿನಾಯಿತಿ ನೀಡಿರುವುದು ತೀವ್ರ ಅಚ್ಚರಿ ತಂದಿದೆ.
ಇದನ್ನೂ ಓದಿ: ಮಹಾಲಿಂಗೇಶ್ವರ ಸನ್ನಿಧಿಯಲ್ಲಿ 30 ಕೋಟಿ ರೂ. ಮೌಲ್ಯದ ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣ ಯೋಜನೆ; ಶಾಸಕ ಅಶೋಕ್ ರೈ
ಸಚಿವ ಸ್ಥಾನ ಹಾಗೂ ಸಂಪುಟ ದರ್ಜೆಯ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲು ಮುಂದಿರುವ ಸಚಿವರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಲು ನೆಪ ಹುಡುಕುವುದು ಅವರ ತೀವ್ರ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಕನ್ನಡ, ಸಂವಿಧಾನ ಹಾಗೂ ರಾಷ್ಟ್ರ ವಿರೋಧಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಕ್ಯಾ. ಚೌಟ ವಾಗ್ದಾಳಿ ನಡೆಸಿದರು.

