ಬೆಳಗಾವಿ: ಚಾಲಕನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗಕ್ಕೆ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ (KSRTC) ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸವದತ್ತಿ-ಧಾರವಾಡ ರಸ್ತೆಯ ಹೊಯ್ಸಳ ಧಾಬಾ ಸಮೀಪ ತಡರಾತ್ರಿ ನಡೆದಿದೆ.
ಮೃತರನ್ನು ಬೈಕ್ ಸವಾರ ವಿನೋದ್ ಕೆಂಚಪ್ಪ ಜೋಗಣ್ಣವರ್ (22), ಹಿಂಬದಿ ಸವಾರರಾದ ಸವದತ್ತಿಯ ರಾಮಾಪುರ ಸೈಟ್ ನಿವಾಸಿ ಆಕಾಶ್ ನಾರಾಯಣ್ ಜಾಧವ್ (20) ಮತ್ತು ಸವದತ್ತಿಯ ಅತ್ತಾರ ಓಣಿ ನಿವಾಸಿ ರವಿ ಬೀರಪ್ಪ ಕುರಬರ್ (22) ಎಂದು ಗುರುತಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ (KA-38/F-1138) ಸವದತ್ತಿಯಿಂದ ಧಾರವಾಡದ ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಹೊಸ ಹೀರೊ ಸ್ಪೆಂಡರ್ ಪ್ಲಸ್ ಬೈಕ್ಗೆ ಸರಾಟವಾಗಿ ಢಿಕ್ಕಿ ಹೊಡೆದಿದ್ದಾನೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ದುರಂತ: ಶಾರ್ಟ್ ಸರ್ಕ್ಯೂಟ್ನಿಂದ ಫ್ರಿಡ್ಜ್ ಸ್ಫೋಟ, ನಿದ್ರೆಯಲ್ಲಿದ್ದ ನಾಲ್ವರು ಮಹಿಳೆಯರು ಸಜೀವ ದಹನ
ಸ್ಥಳದಲ್ಲೇ ಮೂವರ ದಾರುಣ ಸಾವು: ಢಿಕ್ಕಿಯ ರಭಸಕ್ಕೆ ಮೂವರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆ, ಮುಖ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಮೃತ ವಿನೋದ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

