ಯಲ್ಲಾಪುರ: ಮದುವೆಗೆ ನಿರಾಕರಿಸಿದ ಹಿಂದೂ ಮಹಿಳೆಯನ್ನು ಮುಸ್ಲಿಂ ಯುವಕ ಕತ್ತು ಸೀಳಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ರಾಮಪುರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಕಾಳಮ್ಮ ನಗರ ನಿವಾಸಿ ರಂಜಿತ ಮಲ್ಲಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಯಳ್ಳೂರು ಗ್ರಾಮದ ರಫೀಕ್ ಆತ್ಮಹತ್ಯೆ ಮಾಡಿಕೊಂಡ ಕೊಲೆ ಆರೋಪಿಯಾಗಿದ್ದಾನೆ.
ವಿವಾಹಿತ ಮಹಿಳೆಯಾಗಿರುವ ರಂಜಿತ, ಪತಿಯಿಂದ ವಿಚ್ಛೇದನ ಪಡೆದು ತನ್ನ ಮಗನೊಂದಿಗೆ ತಂದೆ, ತಾಯಿ ಹಾಗೂ ಅಣ್ಣನೊಂದಿಗೆ ನೆಲೆಸಿದ್ದಳು. ಆದರೆ, ಕೆಲವು ವರ್ಷಗಳ ಹಿಂದೆ ರಂಜಿತಾಳೊಂದಿಗೆ ರಫೀಕ್ ಪರಿಚಯ ಮಾಡಿಕೊಂಡಿಕೊಂಡಿದ್ದಾನೆ. ನಂತರ ಇಬ್ಬರ ನಡುವೆ ಆತ್ಮೀಯತೆಯೂ ಬೆಳೆದಿತ್ತು. ಎರಡೂ ಕುಟುಂಬಗಳಿಗೂ ಪರಿಚಯ ಇದ್ದ ಕಾರಣ ರಫೀಕ್ ರಂಜಿತಾಳ ಮನೆಗೆ ಭೇಟಿ ನೀಡುತ್ತಿದ್ದನು.

ಹೀಗೆ ಭೇಟಿ ನೀಡುತ್ತಿದ್ದ ರಫೀಕ್, ತನ್ನನ್ನು ಮದುವೆಯಾಗುವಂತೆ ಆಕೆಯೊಂದಿಗೆ ಹೇಳಿದ್ದಾನೆ. ಆದರೆ ಸ್ಪಷ್ಟವಾಗಿ ನಿರಾಕರಿಸಿದ್ದ ರಂಜಿತಾ, ನಾವು ಹೀಗೆಯೇ ಇರೋಣ ಎಂದು ಹೇಳಿದ್ದಳಂತೆ. ಆದರೆ, ಬೆನ್ನು ಬಿಡದ ರಫೀಕ್, ಪದೇಪದೇ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದೇ ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ
ಶನಿವಾರ ಎಂದಿನಂತೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ರಂಜಿತಾಳನ್ನು ಅಡ್ಡಗಟ್ಟಿದ ರಫೀಕ್, ಮದುವೆಯಾಗುವಂತೆ ಪೀಡಿಸಿದ್ದಾನೆ. ಆಗಲೂ ಒಪ್ಪದಿದ್ದ ರಂಜಿತಾಳ ಕುತ್ತಿಗೆಗೆ ಚಾಕುವಿನಿಂದ ಇರಿದು ರಫೀಕ್ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಕೂಡಲೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಂಜಿತ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿರುವಾಗ ಆರೋಪಿಯ ಸಾವಿನ ಸುದ್ದಿ ತಿಳಿದುಬಂದಿದೆ.
ಆರೋಪಿ ರಫೀಕ್ ಆತ್ಮಹತ್ಯೆ
ರಂಜಿತಾಳನ್ನು ಹತ್ಯೆ ಮಾಡಿದ ಆರೋಪಿ ರಫೀಕ್ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆ, ಯಲ್ಲಾಪುರ ಪಟ್ಟಣದ ಹೊರವಲಯದ ಅರಣ್ಯ ಪ್ರದೇಶದಲ್ಲಿ ನೇಣುಬಿಗಿದ ಸ್ಥೀತಿಯಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆರಳಿದ ಹಿಂದೂ ಸಂಘಟನೆಗಳು
ರಂಜಿತಾಳ ಕಗ್ಗೊಲೆಗೆ ಉತ್ತರ ಕನ್ನಡ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದೆ. “ಯಲ್ಲಾಪುರ ನಗರದ ಹಿಂದೂ ಮಹಿಳೆ ರಂಜಿತಾ ಎಂಬುವವರನ್ನು ರಫೀಕ್ ಎಂಬ ವ್ಯಕ್ತಿ ಕತ್ತು ಕೊಯ್ದು ಕೊಲೆ ಮಾಡಿರುವುದನ್ನು ಬಿಜೆಪಿ ಮತ್ತು ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ” ಎಂದು ಬಿಜೆಪಿ ಮುಖಂಡ ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಅಪ್ರಾಪ್ತ ಹಿಂದೂ ಯುವತಿಯ ಮೇಲೆ ಇದೇ ತೆರನಾದ ಲೈಂಗಿಕ ಹಲ್ಲೆ ನಡೆದಾಗ ಪ್ರಭಾವಿಗಳು ಒತ್ತಡ ಹಾಕಿ ಸಂಸ್ತ್ರಸ್ತೆಯ ಪಾಲಕರು ದೂರು ಕೊಡದಂತೆ ತಡೆಹಿಡಿದಿದ್ದರು. ಪಾಲಕರ ಅಸಹಾಯಕತೆ ಹಾಗೂ ಭೀತಿಯ ಕಾರಣಕ್ಕೆ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಸಾಧ್ಯವಾಗಿರಲಿಲ್ಲ. ದಿನೇ ದಿನೇ ಇಂತಹ ಪ್ರಕರಣಗಳು ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಈಗ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಆಲೋಚನೆ ಮಾಡಿ ಮುಂದಿನ ನಡೆ ನಿರ್ಧರಿಸಲಾಗುವುದು. ಇಂತಹ ಅಮಾನವೀಯ ವರ್ತನೆ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗಿ ಮತ್ತು ಸಮರ್ಥವಾಗಿ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com)

