ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಸಂಭ್ರಮದ ನಡುವೆಯೇ ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಅವರು ದೊಡ್ಡ ವಿವಾದವೊಂದನ್ನು ಹಚ್ಚಿದ್ದಾರೆ. ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಗೆದ್ದ ನಂತರ, ನಾಯಕ ಸೂರ್ಯಕುಮಾರ್ ಯಾದವ್, ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರು ವಿಶ್ವಕಪ್ ಟ್ರೋಫಿಯೊಂದಿಗೆ ಅಹಮದಾಬಾದ್ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.ದೇವಸ್ಥಾನಕ್ಕೆ ಟ್ರೋಫಿ ಕೊಂಡೊಯ್ದಿದ್ದನ್ನು ಕೀರ್ತಿ ಆಜಾದ್ ‘ಎಕ್ಸ್’ (ಟ್ವಿಟರ್) ಮೂಲಕ ಕಟುವಾಗಿ ಟೀಕಿಸಿದ್ದಾರೆ
ವಿಶ್ವಕಪ್ ಗೆಲುವು 140 ಕೋಟಿ ಭಾರತೀಯರಿಗೆ ಸೇರಿದ್ದು. ಇದನ್ನು ಕೇವಲ ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಅಥವಾ ಒಂದು ಧರ್ಮದ ಗೆಲುವು ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡವನ್ನು ನೆನಪಿಸಿಕೊಂಡ ಅವರು, “ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರಿದ್ದರು. ಗೆದ್ದಾಗ ನಾವು ಟ್ರೋಫಿಯನ್ನು ಭಾರತಕ್ಕೆ ತಂದೆವೆಯೇ ಹೊರತು ದೇವಸ್ಥಾನಕ್ಕಲ್ಲ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸೋಲಿನ ಕ್ಷಣ: ಪತ್ನಿಯರಿಂದ ಅಪ್ಪುಗೆಯ ಧೈರ್ಯ; ಲಿಪ್ಕಿಸ್ ಕೊಟ್ಟ ಕಿವೀಸ್ನ ಫಿಲಿಪ್ಸ್, ಸೋಧಿ- ವಿಡಿಯೋ ವೈರಲ್
ಮೊಹಮ್ಮದ್ ಸಿರಾಜ್ ಟ್ರೋಫಿಯನ್ನು ಮಸೀದಿಗೆ ಅಥವಾ ಸಂಜು ಸ್ಯಾಮ್ಸನ್ ಚರ್ಚ್ಗೆ ತೆಗೆದುಕೊಂಡು ಹೋಗಿಲ್ಲ. ತಂಡವು ಇಡೀ ದೇಶವನ್ನು ಪ್ರತಿನಿಧಿಸುತ್ತದೆಯೇ ಹೊರತು ಕೇವಲ ಜಯ್ ಶಾ ಅಥವಾ ಸೂರ್ಯಕುಮಾರ್ ಅವರ ಕುಟುಂಬವನ್ನಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಈಗ ಕ್ರೀಡಾ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಪರ-ವಿರೋಧದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

