ಉಡುಪಿ: ಪಾತ್ರೆಯೊಳಗೆ ಮುಖ ಸಿಕ್ಕಿಕೊಂಡು ಎರಡು–ಮೂರು ದಿನಗಳಿಂದ ಸಂಕಷ್ಟ ಅನುಭವಿಸುತ್ತಿದ್ದ ಕೋತಿಯನ್ನು ಸ್ಥಳೀಯ ಯುವಕರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಪೆರ್ನಂಕಿಲ ಗ್ರಾಮದ ಚಿತ್ರಬೈಲು ಪ್ರದೇಶದಲ್ಲಿ ಗುರುವಾರ ನಡೆದಿದೆ.
ಚಿತ್ರಬೈಲು ಗ್ರಾಮದ ಪರಿಸರ ಪ್ರೇಮಿ ಹಾಗೂ ಸಮಾಜಸೇವಕ ನವೀನ್ ಕುಮಾರ್ ಚಿತ್ರಬೈಲು ಅವರಿಗೆ ಪಾತ್ರೆಯೊಳಗೆ ಮುಖ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಕೋತಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಕೋತಿ ಏನನ್ನೂ ಸರಿಯಾಗಿ ನೋಡಲಾಗದೆ ಅಲೆದಾಡುತ್ತಿದ್ದುದು ಕಂಡುಬಂದಿತ್ತು.

ಇದನ್ನೂ ಓದಿ: ಉಡುಪಿಯಲ್ಲಿ ಬೀದಿ ನಾಯಿಗಳಿಗೆ ಹೊಸ ‘ಮನೆ’: ಹಲವು ಎಕರೆ ಜಮೀನು ಮೀಸಲು
ಈ ಸ್ಥಿತಿಯನ್ನು ಕಂಡ ಯುವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೋತಿಯನ್ನು ಕಯಿಯಿಂದ ಕಟ್ಟಿಕೊಂಡು ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಕರೆದುಕೊಂಡು ಹೋದರು. ಬಳಿಕ ಜಾಗರೂಕತೆಯಿಂದ ಪಾತ್ರೆಯಿಂದ ಕೋತಿ ತಲೆಯನ್ನು ಹೊರಗೆಳೆಯಲಾಯಿತು.
ಪಾತ್ರೆಯಿಂದ ತಲೆ ಹೊರಗೆ ಬರುತ್ತಿದ್ದಂತೆ ಕೋತಿ ನೆಮ್ಮದಿಯಾಗಿ ಜಿಗಿದು ಅಲ್ಲಿಂದ ಓಡಿ ಕಾಡಿನತ್ತ ಪಾರಾಯಿತು. ಸಂಕಷ್ಟದಲ್ಲಿದ್ದ ಪ್ರಾಣಿಯನ್ನು ರಕ್ಷಿಸಿದ ಸ್ಥಳೀಯ ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

