ಮಾಲ್ಡೀವ್ಸ್ ಸಮೀಪ ನಡೆದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಶುಕ್ರವಾರ ಮುಂಜಾನೆ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿಬಿದ್ದಿದೆ. ಈ ಬೋಟ್ನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ಗೌತಮ್ ಸಿಂಘಾನಿಯಾ ಕೂಡ ಸೇರಿದ್ದರು.

ಅಪಘಾತದ ತಕ್ಷಣ ಸಿಂಘಾನಿಯಾ ಅವರನ್ನು ರಕ್ಷಿಸಿ ಏರ್ ಲಿಫ್ಟ್ ಮೂಲಕ ಮುಂಬೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಇರಾನ್ ನಾಯಕ ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆಯೇ? ವೈರಲ್ ವಿಡಿಯೋ ಬೆನ್ನಲ್ಲೇ ಶುರುವಾಯ್ತು ಜಾಗತಿಕ ಚರ್ಚೆ
ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ಬೋಟ್ನಲ್ಲಿ ಯುಕೇ ಮತ್ತು ರಷ್ಯಾದ ಮಹಿಳೆಯರು ಸೇರಿದಂತೆ ಐದು ಭಾರತೀಯರು ಇದ್ದರು. ಅಪಘಾತದ ವೇಳೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಅವರಲ್ಲಿ ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಖ್ಯಾತ ರ್ಯಾಲಿ ಚಾಲಕ ಹರಿ ಸಿಂಗ್ ಮತ್ತು ಅವರ ಸ್ನೇಹಿತ ಸೇರಿದ್ದಾರೆ.
ಸಿಂಘಾನಿಯಾ ಮತ್ತು ಹರಿ ಸಿಂಗ್ ದೀರ್ಘಕಾಲದ ಸ್ನೇಹಿತರಾಗಿದ್ದು, ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಹೊಂದಿದ್ದರು. ರಜೆಗಾಗಿ ಮಾಲ್ಡೀವ್ಸ್ಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮಾಲ್ಡೀವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ ಕೋಸ್ಟ್ ಗಾರ್ಡ್ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. ಸಮುದ್ರದ ಅಲೆಗಳ ಕಾರಣ ಶೋಧ ಕಾರ್ಯ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹವಾಮಾನ, ತಾಂತ್ರಿಕ ದೋಷ ಅಥವಾ ಮಾನವ ತಪ್ಪು ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

