ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಕೇರಳ ನೋಂದಣಿ ಹೊಂದಿರುವ ಆಟೋ ರಿಕ್ಷಾವನ್ನು ಟ್ರಾಫಿಕ್ ಪೊಲೀಸರು ತಡೆದ ಘಟನೆಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ದೇರಳಕಟ್ಟೆ ಭಾಗದಲ್ಲಿ ಡಯಾಲಿಸಿಸ್ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಟೋವನ್ನು ಪೊಲೀಸರು ತಪಾಸಣೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಕೆಲವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಪೊಲೀಸ್ ಆಯುಕ್ತರು ನೀಡಿದ ಮಾಹಿತಿ ಪ್ರಕಾರ, ಆ ಆಟೋ ಕೇರಳದಲ್ಲಿ ಖಾಸಗಿ ವಾಹನವಾಗಿ ನೋಂದಾಯಿತವಾಗಿದ್ದರೂ, ಅದನ್ನು ಪ್ರಯಾಣಿಕರನ್ನು ಹಣ ಪಡೆದು ಸಾಗಿಸಲು ಬಳಸಲಾಗುತ್ತಿತ್ತು. ಇದು ಮೋಟಾರು ವಾಹನ ನಿಯಮಗಳ ಉಲ್ಲಂಘನೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ ಆಳ್ವಾಸ್ ನ್ಯಾಚುರೋಪಥಿ ಕಾಲೇಜಿಗೆ 12 ರ್ಯಾಂಕ್

ರೋಗಿಯನ್ನು ಸಾಗಿಸುತ್ತಿರುವುದು ಮಾನವೀಯ ವಿಷಯವಾಗಿದ್ದರೂ, ಖಾಸಗಿ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ, ಸ್ಥಳೀಯ ಆಟೋ ಚಾಲಕರು ಪರವಾನಗಿ ಪಡೆದು ನಿಯಮ ಪಾಲಿಸಿಕೊಂಡು ಕೆಲಸ ಮಾಡುತ್ತಿರುವ ಹಿನ್ನೆಲೆ, ಹೊರ ರಾಜ್ಯ ವಾಹನಗಳಿಗೆ ವಿನಾಯಿತಿ ನೀಡುವುದು ನ್ಯಾಯಸಮ್ಮತವಲ್ಲ ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ಘಟನೆ ವೇಳೆ ಡ್ಯೂಟಿಯಲ್ಲಿ ಇದ್ದ ಎಎಸ್ಐ, ರೋಗಿ ಇದ್ದುದನ್ನು ಗಮನಿಸಿ ಮಾನವೀಯ ದೃಷ್ಟಿಯಿಂದ ಯಾವುದೇ ದಂಡ ವಿಧಿಸದೇ ಬಿಡಲಾಗಿದೆ ಎಂದು ತಿಳಿಸಲಾಗಿದೆ.
ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೇ ಹೊರತು ದುರ್ವರ್ತನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಆಯುಕ್ತರು, ಸಾರ್ವಜನಿಕರು ಮೋಟಾರು ವಾಹನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

