ಮುಂಬೈ: ಖ್ಯಾತ ಕನ್ನಡಕ ಬ್ರ್ಯಾಂಡ್ ‘ಲೆನ್ಸ್ಕಾರ್ಟ್’ ಉದ್ಯೋಗಿಗಳು ತಿಲಕ ಧರಿಸುವುದಕ್ಕೆ ನಿಷೇಧ ಹೇರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮುಂಬೈನ ಮಳಿಗೆಯೊಂದರಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಜಿಯಾ ಇಲಾಹಿ ಖಾನ್ ನೇತೃತ್ವದ ತಂಡ ಮಳಿಗೆಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಕೆಲಸದ ಸ್ಥಳದಲ್ಲಿ ಹಿಂದೂ ಉದ್ಯೋಗಿಗಳು ಬೊಟ್ಟು ಅಥವಾ ತಿಲಕ ಧರಿಸುವುದನ್ನು ಮ್ಯಾನೇಜ್ಮೆಂಟ್ ನಿರ್ಬಂಧಿಸಿದೆ, ಆದರೆ ಹಿಜಾಬ್ ಧರಿಸಲು ಅನುಮತಿ ನೀಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಾಜಿಯಾ ಖಾನ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಮಳಿಗೆಗೆ ಪ್ರವೇಶಿಸಿದರು.

ನಾಜಿಯಾ ಇಲಾಹಿ ಖಾನ್ ಅವರು ಫ್ಲೋರ್ ಮ್ಯಾನೇಜರ್ ಮೊಹ್ಸಿನ್ ಖಾನ್ ಅವರನ್ನು ಪ್ರಶ್ನಿಸಿ, “ಉದ್ಯೋಗಿಗಳು ತಿಲಕ ಇಡುವುದನ್ನು ನಿಷೇಧಿಸಲು ನೀವು ಯಾರು? ನೀವು ಮೊಹ್ಸಿನ್ ಖಾನ್ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಾ?” ಎಂದು ಕಿಡಿಕಾರಿದರು.
ಅಲ್ಲದೆ, ಮುಸ್ಲಿಮರು ನಮಾಜ್ ಮಾಡುವುದನ್ನು ತಪ್ಪಿಸುವಿದಿಲ್ಲ. ನೀವೇಕೆ ನಿಮ್ಮ ಸಂಸ್ಕೃತಿಯೊಂದಿಗೆ ರಾಜಿಮಾಡಿಕೊಳ್ಳುತ್ತಿದ್ದೀರಿ ಎಂದು ಹಿಂದೂ ನೌಕರರನ್ನು ಪ್ರಶ್ನಿಸಿದರು.

ಪ್ರತಿಭಟನೆಯ ಭಾಗವಾಗಿ ನಾಜಿಯಾ ಅವರು ಮಳಿಗೆಯಲ್ಲಿದ್ದ ಹಿಂದೂ ಉದ್ಯೋಗಿಗಳನ್ನು ಕರೆದು ಅವರ ಹಣೆಗೆ ತಿಲಕ ಹಚ್ಚಿದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಬೆದರಿದ ಸಿಬ್ಬಂದಿ ಯಾವುದೇ ವಿರೋಧ ವ್ಯಕ್ತಪಡಿಸದೆ ಮೌನಕ್ಕೆ ಶರಣಾದರು.
ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಫಲ: “ವಿರೋಧ ಪಕ್ಷಗಳು ಸಂವಿಧಾನದ ಅಪರಾಧಿಗಳು” ಎಂದು ಗುಡುಗಿದ ಪ್ರಧಾನಿ ಮೋದಿ!
ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಜಿಯಾ ಖಾನ್, “ಇದು ಹಿಂದೂ ರಾಷ್ಟ್ರ. ಇಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ. ಲೆನ್ಸ್ಕಾರ್ಟ್ ಮಾಲೀಕರು ಈ ಘಟನೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ದೇಶಾದ್ಯಂತ ಮಳಿಗೆಗಳನ್ನು ಮುಚ್ಚಿಸಲಾಗುವುದು ಅಥವಾ ಜನರು ಈ ಬ್ರ್ಯಾಂಡ್ ಅನ್ನು ಬಹಿಷ್ಕರಿಸಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

