ಮಂಗಳೂರು: ಹಾವೇರಿಯಿಂದ ಕೇರಳದ ಮಲಪ್ಪುರಂಗೆ ಲಾರಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ, ಅತ್ಯಂತ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 27 ಜಾನುವಾರುಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹಾವೇರಿ ಕಡೆಯಿಂದ ಕೇರಳದತ್ತ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಬಲವಾದ ಶಂಕೆಯ ಮೇರೆಗೆ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಕಂಕನಾಡಿ ನಗರ ಪೊಲೀಸರಿಗೆ ತಕ್ಷಣದ ಮಾಹಿತಿ ನೀಡಿದ್ದರು. ಸಾರ್ವಜನಿಕ ಮತ್ತು ಸಂಘಟನೆಯ ಕಾರ್ಯಕರ್ತರ ಮಾಹಿತಿ ಮೇರೆಗೆ ಅಲರ್ಟ್ ಆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಪೊಲೀಸರು ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ನಿಗಾ ಇರಿಸಿ, ಸಂಶಯಾಸ್ಪದವಾಗಿ ಬಂದ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಲಾರಿಯೊಳಗೆ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಕ್ರೂರವಾಗಿ ಕೂಡಿ ಹಾಕಲಾಗಿದ್ದ 27 ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ತಕ್ಷಣ ಜಾನುವಾರುಗಳನ್ನು ರಕ್ಷಿಸಿ, ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾವೂರು ಪೊಲೀಸರ ಭಾರಿ ಬೇಟೆ: 1.5 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಕುಖ್ಯಾತ ಪೆಡ್ಲರ್ ‘ಇರ್ಷಾ’ ಬಂಧನ!


