ಬಂಟ್ವಾಳ: ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮುರ್ಜೆ ವಿಶಾಲನಗರದ ಬಳಿ ಶುಕ್ರವಾರ (ಏಪ್ರಿಲ್ 10) ಚಲಿಸುತ್ತಿದ್ದ ಆಟೋ-ರಿಕ್ಷಾವೊಂದು ಹಠಾತ್ತಾಗಿ ಬೆಂಕಿಗೀಡಾಗಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಬಂಬಿಲ ನಿವಾಸಿ ರೇವಣ್ಣ ಎಂಬುವವರಿಗೆ ಸೇರಿದ ಈ ಆಟೋ-ರಿಕ್ಷಾ ಗ್ಯಾಸ್ ಕಿಟ್ ಹೊಂದಿತ್ತು. ಚಾಲನೆಯಲ್ಲಿರುವಾಗಲೇ ಗ್ಯಾಸ್ ಖಾಲಿಯಾದ ಅನುಭವವಾಗಿದ್ದರಿಂದ ಚಾಲಕ ರೇವಣ್ಣ ಅವರು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಗ್ಯಾಸ್ ಸೋರಿಕೆಯ ವಾಸನೆ ಕೇಳಿಬಂದಿದ್ದು, ನೋಡನೋಡುತ್ತಿದ್ದಂತೆಯೇ ಆಟೋಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣ ಕೆಳಗಿಳಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆಯ ಸಮಯದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಆಟೋ ಸಂಪೂರ್ಣ ಸುಟ್ಟು ಹೋಗಿದ್ದು, ಕೇವಲ ಕಬ್ಬಿಣದ ಅವಶೇಷಗಳು ಮಾತ್ರ ಉಳಿದಿವೆ.

ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬ ತನಿಖೆ ನಡೆಯುತ್ತಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


