ಲಕ್ನೋ: ಉತ್ತರ ಪ್ರದೇಶದ ಲಕ್ನೋ ಉಚ್ಚ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ (ಏಪ್ರಿಲ್ 10) ಅತ್ಯಂತ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಮತಾಂತರಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಆಗ್ರಹಿಸಿ ಕೋರ್ಟ್ ಕಟ್ಟಡದ ಮೇಲ್ಛಾವಣಿ ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಡೀ ನ್ಯಾಯಾಲಯದ ಆವರಣದಲ್ಲಿ ಆತಂಕ ಮೂಡಿಸಿತ್ತು.
ಗೊಂಡಾ ಜಿಲ್ಲೆಯ ನಿವಾಸಿಯಾದ ಈ ಮಹಿಳೆ, ತನ್ನನ್ನು ಮದುವೆಯ ಆಮಿಷವೊಡ್ಡಿ ಅಪಹರಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಅಪಹರಣದ ನಂತರ ತನ್ನ ಮೇಲೆ ಹಲವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಮತ್ತು ಬಲವಂತವಾಗಿ ಧರ್ಮ ಬದಲಿಸಿ ಮದುವೆ ಮಾಡಿಸಲಾಗಿದೆ ಎಂದು ಅವರು ದೂರಿದ್ದಾರೆ. ಈ ದೌರ್ಜನ್ಯದ ಪರಿಣಾಮ ತಾನು ಮಗುವಿಗೆ ಜನ್ಮ ನೀಡಿದ್ದು, ಈಗ ಆರೋಪಿಗಳು ಮಗುವಿನ ಜವಾಬ್ದಾರಿಯನ್ನು ಹೊರಲು ನಿರಾಕರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು ASI ಕೊಲೆಯತ್ನ ಪ್ರಕರಣ: ವಿದೇಶದಲ್ಲಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್!
ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಮತ್ತು ಗ್ರಾಮದ ಪ್ರಭಾವಿಗಳು ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಹೈಕೋರ್ಟ್ ಕಟ್ಟಡದ ಮೇಲೇರಿದ್ದರು. ಆರೋಪಿಗಳು ತನ್ನ ಮಗುವನ್ನು ಗಾಳಿಯಲ್ಲಿ ತೂಗಾಡಿಸಿ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಕಿರುಚುತ್ತಿದ್ದರು. ಸ್ಥಳದಲ್ಲಿದ್ದ ವಕೀಲರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಮಹಿಳೆ ಒತ್ತಾಯಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


