ಬೆಳ್ತಂಗಡಿ: ಪುತ್ತೂರಿನ ಪಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದ ಕುಟ್ಟಿಕಲದಲ್ಲಿ ದುಷ್ಕರ್ಮಿಗಳು ಆಹಾರದಲ್ಲಿ ವಿಷ ಬೆರೆಸಿ 10ಕ್ಕೂ ಹೆಚ್ಚು ಬೀದಿ ಹಾಗೂ ಸಾಕು ನಾಯಿಗಳನ್ನು ಕೊಂದಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸ್ಥಳೀಯರು ಹಾಗೂ ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟ್ಟಿಕಲ ಜಂಕ್ಷನ್ ಪ್ರದೇಶದಲ್ಲಿ ಹಲವು ಬೀದಿ ನಾಯಿಗಳು ತಿರುಗಾಡುತ್ತಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಸಾಕು ಪ್ರಾಣಿಗಳ ಜೊತೆಗೆ ಈ ನಾಯಿಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದರು. ಇದೇ ಆಹಾರದಲ್ಲಿ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಕಳ್ಳರ ಕೈ ಚಳಕ: ಸಿಸಿಟಿವಿ ಧ್ವಂಸ, ಹಣದ ಜೊತೆ ಡಿವಿಆರ್ ಕದ್ದು ಪರಾರಿ
ವಿಷ ಮಿಶ್ರಿತ ಆಹಾರ ಸೇವಿಸಿದ ಬಳಿಕ ಬೀದಿ ನಾಯಿಗಳ ಜೊತೆಗೆ ಕೆಲವು ಸಾಕು ನಾಯಿಗಳೂ ತೀವ್ರ ಅಸ್ವಸ್ಥಗೊಂಡು ನೋವಿನಿಂದ ನರಳಾಡಿದವು. ಕಣ್ಣೆದುರೇ ಪ್ರಾಣಿಗಳು ತೀವ್ರ ವೇದನೆ ಅನುಭವಿಸುತ್ತಾ ಮೃತಪಟ್ಟ ದೃಶ್ಯ ಹೃದಯವಿದ್ರಾವಕವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಾಣಿ ಪ್ರೇಮಿಗಳು ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಾಣಿಗಳಿಗೆ ಹಾನಿ ಮಾಡುವುದು ಹಾಗೂ ವಿಷ ನೀಡಿ ಕೊಲ್ಲುವುದು ‘ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ ಆಕ್ಟ್’ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


