ಚಿಕ್ಕಬಳ್ಳಾಪುರ: ಜಿಲ್ಲೆಯ ಎಸ್ಜೆಸಿಐಟಿ (SJCIT) ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ಬಸ್ ಹತ್ತುವ ಭರದಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬಳು ಬಸ್ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ ಹರಿದಿದ್ದು, ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ವಿದ್ಯಾರ್ಥಿನಿಯನ್ನು 20 ವರ್ಷದ ಭಾನುಶ್ರೀ ಎಂದು ಗುರುತಿಸಲಾಗಿದೆ. ಈಕೆ ಎಲ್ಎಲ್ಬಿ (LLB) ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಕಾಲೇಜು ಮುಗಿಸಿ ದೇವನಹಳ್ಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಸ್ ಬಂದೊಡನೆ ಹತ್ತಲು ಮುಂದಾದಾಗ ವಿಪರೀತ ನೂಕುನುಗ್ಗಲು ಉಂಟಾಗಿದ್ದು, ಭಾನುಶ್ರೀ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.

ವಿದ್ಯಾರ್ಥಿನಿ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಸಹಪಾಠಿಗಳು ಮತ್ತು ಇತರ ವಿದ್ಯಾರ್ಥಿಗಳು ಕಿರುಚಾಡಿದ್ದಾರೆ. ಆದರೂ ಬಸ್ ನಿಲ್ಲಿಸದ ಚಾಲಕ ಬಸ್ಸನ್ನು ಮುಂದೆ ಚಲಿಸಿ, ನಂತರ ಮತ್ತೆ ರಿವರ್ಸ್ (ಹಿಂದೆ) ತೆಗೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಬಸ್ಸಿನ ಹಿಂಬದಿಯ ಚಕ್ರ ಭಾನುಶ್ರೀ ಕಾಲಿನ ಮೇಲೆ ಹರಿದಿದೆ. ತೀವ್ರವಾಗಿ ರಕ್ತಸ್ರಾವಗೊಂಡ ಆಕೆಯನ್ನು ತಕ್ಷಣವೇ ದೇವನಹಳ್ಳಿಯ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ

ಘಟನೆಯಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಮತ್ತು ಬಸ್ ಚಾಲಕನ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು. “ಬಸ್ ನಿಲ್ದಾಣಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಮತ್ತು ಚಾಲಕರ ನಿರ್ಲಕ್ಷ್ಯದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ” ಎಂದು ಕಿಡಿಕಾರಿದರು. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

