ಕಲಬುರಗಿ: ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ. ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣವೊಂದ ಇತ್ಯರ್ಥಪಡಿಸಲು ಉದ್ಯಮಿಯೊಬ್ಬರಿಂದ ಪೊಲೀಸ್ ಠಾಣೆಯ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ (PSI) ಸೇರಿದಂತೆ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಜಂಟಿ ದಾಳಿ ನಡೆಸಿ ದಸ್ತಗಿರಿ ಮಾಡಿದ್ದಾರೆ.
ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಅದೇ ಠಾಣೆಯ ವಿಶೇಷ ಶಾಖೆಯ (SB) ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದ ದುರ್ನಡತೆಯ ಅಧಿಕಾರಿಗಳಾಗಿದ್ದಾರೆ. ಇಬ್ಬರೂ ಆರೋಪಿಗಳನ್ನು ಹಣದ ಸಮೇತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ಅಕ್ಕಿ ವ್ಯಾಪಾರಿ ಆನಂದ ಕುಸ್ತಿ ಎಂಬುವವರ ಉದ್ಯಮಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಹಕಾರ ನೀಡಲು ಮತ್ತು ತೊಂದರೆ ಕೊಡದಿರಲು ಪಿಎಸ್ಐ ವಿಶ್ವನಾಥ ಹಾಗೂ ಸಿದ್ದಣ್ಣ ಒಟ್ಟು 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ ಜೂನ್ 12ರಂದು ಮುಂಗಡವಾಗಿ (Advance) 20,000 ರೂಪಾಯಿ ಹಣವನ್ನು ಡಿಜಿಟಲ್ ರೂಪದಲ್ಲಿ ಅಂದರೆ ಫೋನ್ಪೇ (PhonePe) ಮೂಲಕ ಸ್ವೀಕರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:‘ಮದ್ಯದ ಪಾರ್ಟಿ’ ವೇಳೆ ರಕ್ತಪಾತ: ಸ್ನೇಹಿತನನ್ನೇ ವಿವಸ್ತ್ರಗೊಳಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು!
ಬಾಕಿ ಉಳಿದ ಹಣದ ಪೈಕಿ ಮತ್ತೊಮ್ಮೆ 20,000 ರೂಪಾಯಿ ನಗದು ಹಣವನ್ನು ಗುರುವಾರ ಯಡ್ರಾಮಿ ಪೊಲೀಸ್ ಠಾಣೆಯ ಆವರಣದಲ್ಲೇ ದೂರುದಾರ ಆನಂದ್ ಅವರಿಂದ ಆರೋಪಿಗಳು ಪಡೆದುಕೊಳ್ಳುತ್ತಿದ್ದರು. ಈ ವೇಳೆ ಮೊದಲೇ ಹೊಂಚು ಹಾಕಿ ಕುಳಿತಿದ್ದ ಕಲಬುರಗಿ ಲೋಕಾಯುಕ್ತ ಪೊಲೀಸರು ಏಕಾಏಕಿ ಜಂಟಿ ದಾಳಿ ನಡೆಸಿ, ಲಂಚದ ಹಣದೊಂದಿಗೆ ಇಬ್ಬರನ್ನೂ ರೆಡ್ಹ್ಯಾಂಡಾಗಿ (Red-Handed) ಹಿಡಿದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ (Prevention of Corruption Act) ಗಂಭೀರ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


