ಕಾರ್ಕಳ: ಮನೆ ಕಳ್ಳತನ ಪ್ರಕರಣವನ್ನು 24 ಗಂಟೆಗಳೊಳಗೆ ಪತ್ತೆ ಹಚ್ಚಿದ ಕಾರ್ಕಳ ಟೌನ್ ಪೊಲೀಸರು ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟುಂಜಿ ಕಟ್ಟೆ ನಿವಾಸಿ ಶಂಕರ್ ಕುಲಾಲ್ ನೀಡಿದ ದೂರಿನ ಪ್ರಕಾರ, ಏಪ್ರಿಲ್ 23ರ ಬೆಳಗ್ಗೆ 9:10ರಿಂದ ಏಪ್ರಿಲ್ 24ರ ಸಂಜೆ 6ರೊಳಗೆ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬಾಗಿಲು ಒಡೆದು ಒಳನುಗ್ಗಿ ಕಪಾಟಿನಲ್ಲಿ ಇಡಲಾಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.

ಕಳುವಾದ ವಸ್ತುಗಳಲ್ಲಿ 24 ಗ್ರಾಂ ತೂಕದ ಸರ, ಮೂರು ಉಂಗುರಗಳು, ಒಂದು ಬಂಗಲ್ ಹಾಗೂ ಒಂದು ಜೋಡಿ ಕಿವಿಯೋಲೆಗಳು ಸೇರಿದ್ದು, ಒಟ್ಟು ಮೌಲ್ಯ ಸುಮಾರು ₹2.64 ಲಕ್ಷ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿತ್ತು.
ಇದನ್ನೂ ಓದಿ: ಪುತ್ತೂರು: ಟ್ರಕ್ ಟೈರ್ ಪರಿಶೀಲನೆ ವೇಳೆ ಇಬ್ಬರಿಗೆ ಉದ್ಯಮಿಯ ಆಡಿ ಕಾರು ಡಿಕ್ಕಿ; ಓರ್ವನ ಸ್ಥಿತಿ ಗಂಭೀರ

ದೂರು ದಾಖಲಾದ ತಕ್ಷಣವೇ ಕಾರ್ಕಳ ಉಪವಿಭಾಗ ಪೊಲೀಸ್ ಅಧಿಕಾರಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್., ಪಿಎಸ್ಐ ಮುರಳಿಧರ್ ನಾಯಕ್, ಪಿಎಸ್ಐ ಶಿವಕುಮಾರ್ ಎಸ್.ಆರ್. ಸೇರಿದಂತೆ ತಂಡ ಶೀಘ್ರ ತನಿಖೆ ಆರಂಭಿಸಿತು.
ತನಿಖೆಯ ಭಾಗವಾಗಿ ಬೈರಂಪಳ್ಳಿ ಗ್ರಾಮದ ಪಾಳೆಜೆಡ್ಡು ನಿವಾಸಿ ಆನಂದ್ ಕುಲಾಲ್ (40) ಅವರನ್ನು 24 ಗಂಟೆಗಳೊಳಗೆ ಬಂಧಿಸಲಾಯಿತು. ಬಳಿಕ ವಿಚಾರಣೆಯ ವೇಳೆ ಕಳುವಾದ ಚಿನ್ನವನ್ನು ಖರೀದಿಸಿದ್ದ ಆರೋಪದ ಮೇಲೆ ಅಜೇಕಾರ ಮಾರ್ನೆ ಗ್ರಾಮದ ಕೈಕಂಬ ನಿವಾಸಿ ಜಯರಾಮ ಆಚಾರ್ಯ (54)ರನ್ನು ಕೂಡ ಬಂಧಿಸಲಾಯಿತು.
ಬಂಧಿತರಿಂದ ಸುಮಾರು 39 ಗ್ರಾಂ ತೂಕದ ಚಿನ್ನಾಭರಣಗಳನ್ನು, ಅಂದಾಜು ₹5.60 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

