ಬೆಂಗಳೂರು: ರಾಜಧಾನಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಮುಖ್ಯ ಕಚೇರಿಯ ಆವರಣದಲ್ಲೇ ಯೂತ್ ಕಾಂಗ್ರೆಸ್ನ ಎರಡು ಬಣಗಳ ನಡುವೆ ನಡೆದ ಭೀಕರ ಮಾರಾಮಾರಿ ಘಟನೆಗೆ ಸಂಬಂಧಿಸಿದಂತೆ ಹೈಕಮಾಂಡ್ ತೀವ್ರ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಗಲಾಟೆಯ ಬೆನ್ನಲ್ಲೇ ಭಾರತೀಯ ಯುವ ಕಾಂಗ್ರೆಸ್ (IYC) ಪ್ರಧಾನ ಕಾರ್ಯದರ್ಶಿ ನಿಗಮ್ ಅವರು ದೀಪಿಕಾ ರೆಡ್ಡಿ ಬಣದ ಪ್ರಮುಖ ಪದಾಧಿಕಾರಿಗಳಿಗೆ ಕಟ್ಟುನಿಟ್ಟಿನ ಶೋಕಾಸ್ ನೋಟಿಸ್ (Show Cause Notice) ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನು ಹುದ್ದೆಯಿಂದ ವಜಾ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ (ಮೇ 18) ಕೆಪಿಸಿಸಿ ಕಚೇರಿಯಲ್ಲಿ ಹಠಾತ್ ಹೈಡ್ರಾಮಾ ಸೃಷ್ಟಿಯಾಗಿತ್ತು. ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರ ಬೆಂಬಲಿಗರು ಕಚೇರಿ ಆವರಣದಲ್ಲೇ ಪರಸ್ಪರ ನಿಂದಿಸಿಕೊಂಡು, ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದ್ದರು. ಪಕ್ಷದ ಕಚೇರಿಯಲ್ಲೇ ನಡೆದ ಈ ಜಗಳ ಕಾಂಗ್ರೆಸ್ ವಲಯದಲ್ಲಿ ಭಾರೀ ಮುಜುಗರ ಉಂಟುಮಾಡಿತ್ತು.
ಇದನ್ನೂ ಓದಿ: ಸುಳ್ಯ ಜನಾಕ್ರೋಶ ಸಭೆ; ಮಹಿಳೆಯರ ವಿರುದ್ಧ ಕೆಲಸ ಮಾಡುತ್ತಿರುವ ಕಾಂಗ್ರೆಸ್: ಶಾಸಕಿ ಭಾಗೀರಥಿ ಮುರುಳ್ಯ
ಪಕ್ಷದ ಶಿಸ್ತು ಉಲ್ಲಂಘಿಸಿ ಸಾರ್ವಜನಿಕವಾಗಿ ರಂಪಾಟ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ನಾಯಕತ್ವ, ಗಲಾಟೆಯಲ್ಲಿ ಭಾಗಿಯಾದ ದೀಪಿಕಾ ರೆಡ್ಡಿ, ಸಂದೀಪ್, ಮಂಜುನಾಥ್ ಶೆಟ್ಟಿ, ನಿಖಿಲ್ ಕೊಂಡಜ್ಜಿ ಸೇರಿದಂತೆ ಹಲವು ಪದಾಧಿಕಾರಿಗಳಿಗೆ ನೋಟಿಸ್ ನೀಡಿದೆ. ತಮ್ಮ ವರ್ತನೆಗೆ ಸೂಕ್ತ ಕಾರಣ ನೀಡುವಂತೆ ಮತ್ತು ಒಂದು ವಾರದೊಳಗೆ ನೋಟಿಸ್ಗೆ ಲಿಖಿತ ಉತ್ತರ ನೀಡುವಂತೆ ಗಡುವು ವಿಧಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕಠಿಣ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೈಕಮಾಂಡ್ ಎಚ್ಚರಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


