ಬಂಟಕಲ್ಲು: ರಾಜಾಪುರ ಸಾರಸ್ವತ ಹಾಗೂ ಬಾಲಾವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವಿವಾಹಾಕಾಂಕ್ಷಿ ಯುವಕ-ಯುವತಿಯರಿಗೆ ಅನುಕೂಲವಾಗುವಂತೆ ʼಋಣಾನುಬಂಧʼ ವಧುವರ ಪರಿಚಯ ಕಾರ್ಯಕ್ರಮವನ್ನು ಮೇ 17 ರಂದು ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಆರ್ಎಸ್ಬಿ ಮತ್ತು ಬಿಜಿಎಸ್ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ನೇತೃತ್ವದಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಂಟಕಲ್ಲು ಆಡಳಿತ ಮಂಡಳಿ, ರಾಜಾಪುರ ಸಾರಸ್ವತ ಸೇವಾವೃಂದ, ಶ್ರೀ ದುರ್ಗಾ ಮಹಿಳಾ ವೃಂದ ಹಾಗೂ ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ ಬಂಟಕಲ್ಲು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುತ್ತಿದೆ.

ವಿವಾಹಾಸಕ್ತ ಯುವಕ-ಯುವತಿಯರು ತಮ್ಮ ಬಯೋಡೇಟಾ ಮತ್ತು ಪೋಸ್ಟ್ಕಾರ್ಡ್ ಗಾತ್ರದ ಭಾವಚಿತ್ರವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ಸಮುದಾಯದ ಯುವಜನರಿಗೆ ಪರಿಚಯ ಬೆಳೆಸುವ ಉತ್ತಮ ಅವಕಾಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಗಂಗಾಧರ್ ಶೇಂದ್ರೆಕಾರ್ ಆಯ್ಕೆ

ಇದೇ ದಿನ ವಿಶೇಷ ಕಾರ್ಯಕ್ರಮವಾಗಿ ಬೆಳಗ್ಗೆ 9 ಗಂಟೆಯಿಂದ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಜೀವನ ತರಬೇತುದಾರ ಶ್ರೀ ಸುಬ್ರಹ್ಮಣ್ಯ ಕುಳೇದು ಅವರು “ಜೀವನದ ದೃಷ್ಟಿಕೋನವನ್ನು ಹೇಗೆ ಬದಲಾಯಿಸುವುದು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಯುವಜನರಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಜೀವನದ ದಿಕ್ಕು ಬಗ್ಗೆ ಅರಿವು ಮೂಡಿಸುವುದು ಈ ಉಪನ್ಯಾಸದ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ಮತ್ತು ಹಿರಿಯ ದಂಪತಿಗಳಿಗೆ ವಿಶೇಷ ಸನ್ಮಾನವನ್ನು ಕೂಡ ಆಯೋಜಿಸಲಾಗಿದೆ. ಇದು ಸಮಾಜದ ಹಿರಿಯರ ಅನುಭವಕ್ಕೆ ಗೌರವ ನೀಡುವ ಜೊತೆಗೆ ಯುವ ಪೀಳಿಗೆಗೆ ಪ್ರೇರಣೆ ನೀಡುವ ಕಾರ್ಯಕ್ರಮವಾಗಲಿದೆ.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ನೋಂದಣಿ ಹಾಗೂ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಸಮಾಜದ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

