ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿರುವ ಸಾಧನ ಸಮಾವೇಶದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾರಿ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಒಂದು ಕಾಲದಲ್ಲಿ ಪ್ರಗತಿಪರವಾಗಿದ್ದ ಕರ್ನಾಟಕ ರಾಜ್ಯವನ್ನು ಇಂದು ಸಂಪೂರ್ಣ ಋಣಭಾರದ ರಾಜ್ಯವಾಗಿ ಪರಿವರ್ತಿಸಿರುವುದೇ ಸಿದ್ದರಾಮಯ್ಯ ಸರ್ಕಾರದ ಅಸಲಿ ಸಾಧನೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಸಿದ್ದರಾಮಯ್ಯನವರು ಕರ್ನಾಟಕದ ಪ್ರತಿ ಪ್ರಜೆಯನ್ನು ಸಾಲಗಾರನನ್ನಾಗಿ ಮಾಡಿದ್ದಾರೆ. ರಾಜ್ಯದ ಜನರನ್ನು ಸಾಲದ ಕೂಪಕ್ಕೆ ದೂಡಿರುವ ಇವರು, ಈಗ ಯಾವ ಮಾನದಂಡದ ಆಧಾರದ ಮೇಲೆ ಸಾಧನ ಸಮಾವೇಶ ಮಾಡುತ್ತಿದ್ದಾರೆ ಎಂಬುದನ್ನು ಜನತೆಗೆ ಉತ್ತರಿಸಬೇಕು” ಎಂದು ಚೌಟ ಸವಾಲು ಹಾಕಿದರು. ಸಿದ್ದರಾಮಯ್ಯನವರು ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ, ಕೊನೆಯ ಹಂತದಲ್ಲಿ ರಾಜ್ಯವನ್ನು ಈ ಸ್ಥಿತಿಗೆ ತಂದಿಟ್ಟಿರುವುದು ಆಶ್ಚರ್ಯ ತಂದಿದೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಅಪಮಾನ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ಕ್ಯಾ. ಬ್ರಿಜೇಶ್ ಚೌಟ ವಾಗ್ದಾಳಿ
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತೀವ್ರ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿದ ಸಂಸದರು, “ಆರ್ಥಿಕ ಶಿಸ್ತಿಲ್ಲದ ಕಾರಣ ಕೇಂದ್ರದ ಯೋಜನೆಗಳಿಗೆ ತನ್ನ ಪಾಲಿನ ಶೇರ್ (ರಾಜ್ಯದ ಪಾಲು) ನೀಡಲು ಸರ್ಕಾರದ ಬಳಿ ಹಣವಿಲ್ಲ. ಇದರ ಜೊತೆಗೆ ಪ್ರಸಿದ್ಧ ‘ಕ್ಷೀರಧಾರೆ’ ಯೋಜನೆಯಡಿ ರಾಜ್ಯದ ಸುಮಾರು 35 ಲಕ್ಷ ಹೈನುಗಾರ ರೈತರಿಗೆ ಈ ಸರ್ಕಾರ ದ್ರೋಹ ಬಗೆದಿದೆ. ಕಳೆದ ಒಂಬತ್ತು ತಿಂಗಳಿನಿಂದ ರೈತರಿಗೆ ಕ್ಷೀರಧಾರೆಯ ಪ್ರೋತ್ಸಾಹ ಧನದ ಹಣವೇ ಸಂದಾಯವಾಗಿಲ್ಲ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾವು ಎಲ್ಲೂ ನೋಡಿಲ್ಲ” ಎಂದು ಮಂಗಳೂರಿನಲ್ಲಿ ಚೌಟ ಗುಡುಗಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


