ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭೇಟಿಯ ವೇಳೆ ಉಡುಪಿಯಲ್ಲಿ ಸೌಹಾರ್ದತೆಯ ಸಾಕ್ಷಿಯಂತೆ ಬಿಂಬಿತವಾಗಿದ್ದ ಘಟನೆಯೊಂದು ಈಗ ಸಂಪೂರ್ಣ ತಿರುವು ಪಡೆದುಕೊಂಡಿದೆ. ಕಣ್ಣೀರು ಹಾಕಿದ ಮಹಿಳೆಯರ ಅಸಲಿ ಸತ್ಯ ಬಯಲಾಗುತ್ತಿದ್ದಂತೆ, ಸಚಿವರಿಗೆ ಬಿಜೆಪಿ ಮಹಿಳಾ ಮೋರ್ಚಾ ಭರ್ಜರಿ ತಿರುಗೇಟು ನೀಡಿದೆ.
ಇತ್ತೀಚೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ ಪ್ರವಾಸದಲ್ಲಿದ್ದಾಗ, ಮುಸ್ಲಿಂ ಮಹಿಳೆಯರು ಅಸಹಾಯಕ ಹಿಂದೂ ವೃದ್ಧ ಮಹಿಳೆಯೊಬ್ಬರನ್ನು ಕರೆತಂದು ಆಕೆಗೆ ಐದು ಸೆಂಟ್ಸ್ ಭೂಮಿಯ ದಾಖಲೆ ಸಮಸ್ಯೆಯಿಂದ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ನೆರವು ಕೋರಿದ್ದರು. ಈ ವೇಳೆ ಮುಸ್ಲಿಂ ಮಹಿಳೆಯರು ಆ ಹಿಂದೂ ವೃದ್ಧೆಗಾಗಿ ಕಣ್ಣೀರು ಹಾಕಿದ್ದರು. ಇದನ್ನು ನೋಡಿ ಭಾವುಕರಾಗಿದ್ದ ಸಚಿವರು, “ಹಿಂದೂ ಮಹಿಳೆಗಾಗಿ ಮುಸ್ಲಿಂ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ, ಉಡುಪಿ ಬಿಜೆಪಿಯವರು ಇದನ್ನು ನೋಡಿ ಸೌಹಾರ್ದತೆ ಕಲಿಯಬೇಕು,” ಎಂದು ರಾಜಕೀಯ ಜಟಾಪಟಿಗೆ ನಾಂದಿ ಹಾಡಿದ್ದರು.
ಇದನ್ನೂ ಓದಿ: ಉಡುಪಿ: ಮಲ್ಪೆ ಕಡಲತೀರದಲ್ಲಿ ಕಣ್ಣುಮನ ಸೆಳೆದ ಭವ್ಯ ;ಗಂಗಾರತಿ ಕೊಡವೂರು ದೇವಸ್ಥಾನದ ಮಹಾರುದ್ರ ಯಾಗದ ಅಂಗವಾಗಿ ವಿಶೇಷ ಪೂಜೆ!
ಆದರೆ, ಈಗ ಕಣ್ಣೀರು ಹಾಕಿದ ಮಹಿಳೆಯರ ಅಸಲಿ ಸತ್ಯ ಸಾರ್ವಜನಿಕವಾಗಿ ಬಯಲಾಗಿದೆ. ಆ ಅಸಹಾಯಕ ವೃದ್ಧ ಮಹಿಳೆ ಗಿರಿಜಾ ಶೆಟ್ಟಿಗಾರ್ ಮತ್ತು ಅವರ ಪರವಾಗಿ ಮನವಿ ಮಾಡಿ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆ ಬೇರೆ ಯಾರೂ ಅಲ್ಲ, ತಾಯಿ ಮತ್ತು ಮಗಳು! ವೃದ್ಧೆ ಗಿರಿಜಾ ಶೆಟ್ಟಿಗಾರ್ ಅವರ ಮಗಳು ಸುಮಾರು 25 ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಂತ ಪುತ್ರಿಯೇ ತನ್ನ ತಾಯಿಯನ್ನು ಕರೆತಂದು ಸಹಾಯ ಕೇಳಿದ್ದನ್ನು, ನೆರೆಹೊರೆಯ ಮುಸ್ಲಿಂ ಮಹಿಳೆಯರು ಬಂದು ಸಹಾಯ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಮಹಿಳಾ ಮೋರ್ಚಾ ಕಿಡಿಕಾರಿದ್ದೇನು?:
ಈ ಸತ್ಯ ಹೊರಬರುತ್ತಿದ್ದಂತೆ ಉಡುಪಿ ಬಿಜೆಪಿ ಮಹಿಳಾ ಮೋರ್ಚಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಸ್ವಂತ ಮಗಳಾಗಿದ್ದರೂ ನೆರೆಮನೆಯ ಮುಸ್ಲಿಂ ಮಹಿಳೆ ಎಂದು ಗುರುತಿಸಿಕೊಂಡು ನಾಟಕವಾಡಿರುವುದು ಎಷ್ಟು ಸರಿ? ಜಿಲ್ಲೆಗೆ ಅತಿಥಿಯಾಗಿ ಬರುವ ತಮಗೆ ಕೇವಲ ಬಿಟ್ಟಿ ಪ್ರಚಾರದ ತೆವಲು,” ಎಂದು ಕಿಡಿಕಾರಿದ್ದಾರೆ. ಅಲ್ಲದೆ, “ಸೌಹಾರ್ದತೆಯ ಪಾಠವನ್ನು ನಿಮ್ಮಿಂದ ಕಲಿಯಬೇಕಾದ ಅಗತ್ಯ ನಮಗಿಲ್ಲ,” ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


