ಚಿಕ್ಕಬಳ್ಳಾಪುರ: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ 21 ವರ್ಷದ ಅವಿವಾಹಿತ ಯುವತಿಯೊಬ್ಬಳು ಆಸ್ಪತ್ರೆಗೆ ದಾಖಲಾದ ವೇಳೆ ಗರ್ಭಿಣಿಯಾಗಿದ್ದ ರಹಸ್ಯ ಬಯಲಾಗಿದ್ದು, ಸಿಜೇರಿಯನ್ ಚಿಕಿತ್ಸೆಯ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿರುವ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ನಿವಾಸಿ (21) ಎಂದು ಗುರುತಿಸಲಾಗಿದೆ.
ಆಸ್ಪತ್ರೆಗೆ ದಾಖಲಾದಾಗ ಬಯಲಾಯ್ತು ಗರ್ಭಧಾರಣೆ ರಹಸ್ಯ
ಯುವತಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯನ್ನು ತಪಾಸಣೆಗೊಳಪಡಿಸಿದ ವೈದ್ಯರಿಗೆ ಯುವತಿ ಪೂರ್ಣ ಗರ್ಭಿಣಿಯಾಗಿದ್ದು ಹಾಗೂ ಹೊಟ್ಟೆಯಲ್ಲಿದ್ದ ಮಗು ಈಗಾಗಲೇ ಮೃತಪಟ್ಟಿರುವುದು ಕಂಡುಬಂದಿದೆ. ಮೃತಪಟ್ಟ ಮಗುವನ್ನು ಹೊರತೆಗೆಯಲು ವೈದ್ಯರು ತಕ್ಷಣವೇ ಸಿಜೇರಿಯನ್ ಶಸ್ತ್ರಚಿಕಿ ನಡೆಸಿ ಮಗುವಿನ ಕಳೆಬರಹವನ್ನು ಹೊರತೆಗೆದಿದ್ದರು. ಶಸ್ತ್ರಚಿತ್ಸೆ ನಡೆದು ಎರಡು ದಿನಗಳ ಕಾಲ ತೀವ್ರ ನಿಗಾದಲ್ಲಿದ್ದ ಯುವತಿಯ ಆರೋಗ್ಯ ಸ್ಥಿತಿ ಕ್ಷೀಣಿಸಿ, ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಪ್ರೇಮಾಂಕುರ ಹಾಗೂ ರಹಸ್ಯ ಕಾಯ್ದುಕೊಂಡಿದ್ದ ಯುವತಿ
ಮೃತ ಯುವತಿಗೆ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಯುವಕನೊಬ್ಬನ ಜೊತೆ ಪ್ರೇಮಾಂಕುರವಾಗಿದ್ದು, ಆತನೊಂದಿಗಿನ ಸಂಪರ್ಕದಿಂದ ಗರ್ಭಿಣಿಯಾಗಿದ್ದಳು ಎಂದು ಆರೋಪಿಸಲಾಗಿದೆ. ಆದರೆ, ತಾನು ಗರ್ಭಿಣಿಯಾಗಿರುವ ವಿಚಾರವನ್ನು ಯುವತಿ ಮನೆಯವರಿಂದ ಸಂಪೂರ್ಣವಾಗಿ ಮುಚ್ಚಿಟ್ಟಿದ್ದಳು. ಆಸ್ಪತ್ರೆಗೆ ದಾಖಲಾಗಿ ವೈದ್ಯರು ಪರೀಕ್ಷಿಸಿದ ಮೇಲಷ್ಟೇ ಆಕೆ ಗರ್ಭಿಣಿಯಾಗಿದ್ದ ವಿಷಯ ಕುಟುಂಬಸ್ಥರಿಗೆ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ತಕ್ಷಣ ಪೆರೇಸಂದ್ರ ಠಾಣೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವತಿಯ ಸಾವಿಗೆ ಕಾರಣವಾದ ಪ್ರೇಮ ಪ್ರಕರಣ ಹಾಗೂ ಪರಿಸ್ಥಿತಿಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

