ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಮೊಹಮ್ಮದ್ ಶಾರಿಕ್ಗೆ 10 ವರ್ಷಗಳ ಕಠಿಣ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ, ವಿಶ್ವ ಹಿಂದೂ ಪರಿಷತ್ ಮುಖಂಡರು ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದೇರ್ಕಳ ಗರಡಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಈ ಪ್ರಾರ್ಥನೆಯಲ್ಲಿ, ಪ್ರಕರಣದ ಕುರಿತು ಪ್ರಮುಖ ಅಂಶಗಳನ್ನು ಹಂಚಿಕೊಳ್ಳಲಾಯಿತು. 2022ರಲ್ಲಿ ಬಾಂಬ್ ಸ್ಫೋಟಗೊಂಡಾಗ ನಡೆಯಬೇಕಿದ್ದ ಭಾರಿ ದೊಡ್ಡ ಅನಾಹುತವು ಕರಾವಳಿಯ ಕಾರಣಿಕ ದೈವಗಳ ಶಕ್ತಿಯಿಂದಲೇ ತಪ್ಪಿದೆ. ದೈವಗಳ ಆಶೀರ್ವಾದ ಇಲ್ಲದಿದ್ದರೆ ಮಂಗಳೂರು ರಕ್ತಪಾತಕ್ಕೆ ಸಾಕ್ಷಿಯಾಗುತ್ತಿತ್ತು ಎಂದು ಮುಖಂಡರು ಅಭಿಪ್ರಾಯಪಟ್ಟರು.

ಎನ್ಐಎ (NIA) ವಿಶೇಷ ನ್ಯಾಯಾಲಯವು ಶಾರಿಕ್ನನ್ನು ದೋಷಿ ಎಂದು ಘೋಷಿಸಿ 10 ವರ್ಷ ಶಿಕ್ಷೆ ನೀಡಿರುವುದನ್ನು ವಿಎಚ್ಪಿ ಸಂಪೂರ್ಣವಾಗಿ ಸ್ವಾಗತಿಸಿದೆ.ಶಿಕ್ಷೆಯ ಪ್ರಮಾಣವು 10 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಗೆ ಏರಿಕೆಯಾಗಲಿ ಮತ್ತು ದೇಶದ್ರೋಹಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಲಿ ಎಂದು ಗರಡಿ ಕ್ಷೇತ್ರದಲ್ಲಿ ದೈವಗಳಿಗೆ ಹರಕೆ ಸಲ್ಲಿಸಲಾಯಿತು.

ಸಮಾಜಕ್ಕೆ ಆತಂಕ ತಂದಿದ್ದ ಈ ಪ್ರಕರಣದಲ್ಲಿ ಕಾನೂನುಬದ್ಧವಾಗಿ ಶಿಕ್ಷೆಯಾಗಿರುವುದು ಧರ್ಮದ ಜಯವಾಗಿದೆ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಗರಡಿ ಕ್ಷೇತ್ರದಲ್ಲಿ ನಡೆದ ಈ ಪ್ರಾರ್ಥನಾ ಸಭೆಯಲ್ಲಿ ಹಲವಾರು ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

