ಮುಂಬೈ: ಮಹಾರಾಷ್ಟ್ರದ ಮುಂಬೈನ ಪೈಧೋನಿ (Pydhonie) ಪ್ರದೇಶದಲ್ಲಿ ದಿವಸ ಬೆಳಗಾಗುವುದರೊಳಗೆ ಇಡೀ ಕುಟುಂಬವೊಂದು ಅಂತ್ಯಗೊಂಡಿರುವ ಅತ್ಯಂತ ದುರಂತ ಘಟನೆ ನಡೆದಿದೆ. ರಾತ್ರಿ ಊಟದ ನಂತರ ಕಲ್ಲಂಗಡಿ ಹಣ್ಣು ಸೇವಿಸಿದ್ದ ಪತಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಫುಡ್ ಪಾಯಿಸನಿಂಗ್ನಿಂದ (ವಿಷಾಹಾರ) ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಏಪ್ರಿಲ್ 25, 2026ರ ಶನಿವಾರ ರಾತ್ರಿ ಈ ಘಟನೆ ನಡೆದಿದೆ.ಅಬ್ದುಲ್ಲಾ ಡೋಕಾಡಿಯಾ (40), ಪತ್ನಿ ನಸ್ರೀನ್ ಡೋಕಾಡಿಯಾ (35), ಪುತ್ರಿಯರಾದ ಆಯೇಷಾ (16) ಮತ್ತು ಝೈನಾಬ್ (13) ಮೃತರು ಎಂದು ಹೇಳಲಾಗಿದೆ. ಅಬ್ದುಲ್ಲಾ ಅವರ ಕುಟುಂಬ ಶನಿವಾರ ರಾತ್ರಿ ತಮ್ಮ ಸಂಬಂಧಿಕರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಎಲ್ಲರೂ ಸೇರಿ ಬಿರಿಯಾನಿ ಸೇವಿಸಿದ್ದರು. ರಾತ್ರಿ 10:30ಕ್ಕೆ ಸಂಬಂಧಿಕರು ಮನೆಗೆ ತೆರಳಿದ್ದರು.

ಅನಾಹುತ ನಡೆದದ್ದು ಹೇಗೆ?
ಸಂಬಂಧಿಕರು ಹೋದ ನಂತರ, ಅಂದರೆ ಮಧ್ಯರಾತ್ರಿ ಸುಮಾರು 1:00 ರಿಂದ 1:30 ರ ಸುಮಾರಿಗೆ ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ತಿಂದಿದ್ದಾರೆ. ಅದರ ಬೆನ್ನಲ್ಲೇ ಅವರಿಗೆ ವಾಂತಿ ಮತ್ತು ಭೇದಿ ಆರಂಭವಾಗಿದೆ. ಬೆಳಗಿನ ಜಾವ 5:00 ರಿಂದ 6:00 ಗಂಟೆಯ ಸುಮಾರಿಗೆ ಇಡೀ ಕುಟುಂಬದ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ತಕ್ಷಣ ಅವರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ.
ಕುಟುಂಬದ ಜೊತೆ ಬಿರಿಯಾನಿ ತಿಂದಿದ್ದ ಸಂಬಂಧಿಕರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಅವರು ಕಲ್ಲಂಗಡಿ ಹಣ್ಣು ತಿಂದಿರಲಿಲ್ಲ. ಹೀಗಾಗಿ ಸಾವಿಗೆ ಕಲ್ಲಂಗಡಿ ಹಣ್ಣಿನಲ್ಲಿರಬಹುದಾದ ವಿಷಕಾರಿ ಅಂಶ ಅಥವಾ ಬಿರಿಯಾನಿ ತಿಂದ ನಂತರ ಹಣ್ಣು ತಿಂದಾಗ ಉಂಟಾದ ರಾಸಾಯನಿಕ ಕ್ರಿಯೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹದ ವಿಧಿವಿಜ್ಞಾನ ಪರೀಕ್ಷೆ (Forensic test) ಮತ್ತು ಪೋಸ್ಟ್ಮಾರ್ಟಂ ವರದಿಗಾಗಿ ಕಾಯುತ್ತಿದ್ದಾರೆ. ಮನೆಯಲ್ಲಿದ್ದ ಆಹಾರದ ಮಾದರಿಗಳು ಮತ್ತು ಅರ್ಧ ಉಳಿದಿದ್ದ ಕಲ್ಲಂಗಡಿ ಹಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

