ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸ್ಯಾಫ್ರನ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಹಾಗೂ ಕ್ರಾಸ್ ವೋಟಿಂಗ್ (Cross-Voting) ನಡೆದಿರುವ ಶಂಕೆಯ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (D V Sadananda Gowda) ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆಯಿದೆ ಎಂದು ನಾನು ಮೊದಲೇ ಎಚ್ಚರಿಸಿದ್ದೆ, ಆದರೆ ರಾಜ್ಯ ನಾಯಕರು ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡರು, ಪಕ್ಷದೊಳಗಿನ ಆಂತರಿಕ ಸಮನ್ವಯದ ಕೊರತೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. “ಪರಿಷತ್ ಚುನಾವಣೆಯ ರಣತಂತ್ರ ರೂಪಿಸುವಾಗಲೇ ಕೆಲವು ಅತೃಪ್ತ ಶಾಸಕರು ಮತ್ತು ನಾಯಕರಿಂದ ಅಡ್ಡ ಮತದಾನ ನಡೆಯುವ ಆತಂಕ ಇತ್ತು. ಈ ಬಗ್ಗೆ ನಾನು ರಾಜ್ಯದ ಕೋರ್ ಕಮಿಟಿ ಮತ್ತು ಪ್ರಮುಖ ನಾಯಕರಿಗೆ ಮುಂಚಿತವಾಗಿಯೇ ಕಟ್ಟುನಿಟ್ಟಿನ ಮುನ್ಸೂಚನೆ ಹಾಗೂ ಎಚ್ಚರಿಕೆಯನ್ನು ನೀಡಿದ್ದೆ. ಆದರೆ, ನಮ್ಮ ನಾಯಕರು ಅತಿಯಾದ ಆತ್ಮವಿಶ್ವಾಸದಿಂದ ನನ್ನ ಎಚ್ಚರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಅದರ ಫಲಿತಾಂಶವೇ ಇಂದು ನಮ್ಮ ಕಣ್ಣೆದುರಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Political: ಅಬಕಾರಿ ಇಲಾಖೆಯಲ್ಲಿ ಬಹುಕೋಟಿ ಹಗರಣ: ಬಿಜೆಪಿ ಆರೋಪ
ರಾಜ್ಯ ಬಿಜೆಪಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ವಿಧಾನದ ಬಗ್ಗೆಯೂ ಡಿವಿಎಸ್ ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆಗಳಲ್ಲಿ ಸ್ಥಳೀಯ ನಾಯಕರನ್ನು ಮತ್ತು ವಾಸ್ತವ ಸ್ಥಿತಿಯನ್ನು ಅರಿಯದೆ ಕೇವಲ ಮೇಲ್ಮಟ್ಟದ ಲೆಕ್ಕಾಚಾರದ ಮೇಲೆ ಚುನಾವಣೆ ಎದುರಿಸಿದ್ದರಿಂದಲೇ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಸೋಲಿಗೆ ಮತ್ತು ಅಡ್ಡ ಮತದಾನಕ್ಕೆ ರಾಜ್ಯದ ಉನ್ನತ ನಾಯಕರೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಅವರು ಪರೋಕ್ಷವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವದತ್ತ ಬೆರಳು ತೋರಿಸಿದ್ದಾರೆ. ಪರಿಷತ್ ಚುನಾವಣೆಯ ಬೆನ್ನಲ್ಲೇ ಸದಾನಂದ ಗೌಡರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

